ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಮಂಗಳವಾರ ಉತ್ತರಾದಿ ಮಠ ಪೀಠಾಧಿಪತಿ ಶ್ರೀಸತ್ಯಾತ್ಮತೀರ್ಥ ಶ್ರೀಗಳ ನೇತೃತ್ವದಲ್ಲಿ ಕವೀಂದ್ರತೀರ್ಥರ ಪೂರ್ವಾರಾಧನೆ ಶ್ರದ್ಧಾ, ಭಕ್ತಯಿಂದ ಜರುಗಿತು.
ಬೆಳಿಗ್ಗೆ ಕವೀಂದ್ರ ತೀರ್ಥರ ಮೂಲವೃಂದಾವನದಲ್ಲಿ ಪ್ರಾತಃ ಪ್ರಾರ್ಥನೆ, ದಂಡೋದಕ, ಪಾದೋದಿಕ ಸ್ನಾನ, ಶ್ರೀಮನ್ ನ್ಯಾಯಸುಧಾ ಪಾಠ, ಭಕ್ತರಿಗೆ ಮುದ್ರಾಧಾರಣೆ, ಜ್ಞಾನಸತ್ರ, ಉತ್ತರಾದಿಮಠದ ಸಂಸ್ಥಾನ ಪೂಜೆ, ಮೂಲರಾಮಾದಿ 28 ಪ್ರತಿಮೆಗಳ ಸಂಸ್ಥಾನ ಪೂಜೆ, ವಿದ್ಯಾರ್ಥಿಗಳ ಅನುವಾದ, ಪಂಡಿತರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಹಾಗೇ ಕವೀಂದ್ರತೀರ್ಥರ ಮೂಲ ವೃಂದಾವನಕ್ಕೆ ಪಂಚಾಮೃತಾಭಿಷೇಕ, ಹಸ್ತೋದಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಸಂಜೆ ಸತ್ಯಾತ್ಮತೀರ್ಥರಿಂದ ಭಕ್ತರಿಗೆ ಅನುಗ್ರಹ ಸಂದೇಶ, ವಿದ್ಯಾರ್ಥಿಗಳ ಅನುವಾದ, ವೇದಾಂತ ಗ್ರಂಥಗಳ ಪಾಠ, ಸ್ವಸ್ತಿವಾಚನ ಕಾರ್ಯಕ್ರಮ ಜರುಗಿದವು. ನಂತರ ಉತ್ತರಾದಿ ಮಠದ ಪರಂಪರೆಯ ಪೂರ್ವಯತಿಗಳಾದ ಸತ್ಯಧ್ಯಾನತೀರ್ಥ ಶ್ರೀಪಾದಂಗಳವರ ಮಧ್ಯಾರಾಧನಾ ಮಹೋತ್ಸವ ನಿಮಿತ್ತ ವಿಶೇಷ ಉಪನ್ಯಾಸ, ಪ್ರವಚನ, ದೀಪೋತ್ಸವ ಕಾರ್ಯಕ್ರಮ ನಡೆಯಿತು.
ಪಂಡಿತ ವಿದ್ಯಾದೀಶಾಚಾರ್ಯ ಗುತ್ತಲ್, ಶಶಿ ಆಚಾರ್ಯ, ರಾಮಾಚಾರ್ಯ ಉಮರ್ಜಿ, ಆನಂದಾಚಾರ್ಯ ಜೋಶಿ ಅಕ್ಕಲಕೋಟೆ, ನಾರಾಯಣಾಚಾರ್ಯ ಜೋಶಿ, ಶ್ರೀಕಾಂತಾಚಾರ್ಯ ಮುಕ್ಕುಂದಿ, ಆನಂದ ತೀರ್ಥಾಚಾರ್ ಹುಲಿಗಿ, ನಾರಾಯಣಾಚಾರ್ಯ ಹುಲಿಗಿ, ಪ್ರಸನ್ನಾಚಾರ್ಯ ಕಟ್ಟಿ, ರಾಘವೇಂದ್ರಾಚಾರ್ಯ, ಅಡವಿರಾವ್ ಕಲಾಲ ಬಂಡಿ, ಶ್ಯಾಮಾಚಾರ್ ಜೋಶಿ, ಉಪೇಂದ್ರಾಚಾರ್ ಕೇಸಕ್ಕಿ, ಕೃಷ್ಣಾಚಾರ್, ಸತ್ಯಭೋದಾಚಾರ್, ಜಯಸಿಂಹಾಚಾರ್ ಸೇರಿದಂತೆ ಕೊಪ್ಪಳ, ಬಳ್ಳಾರಿ, ರಾಯಚೂರು, ಬೆಂಗಳೂರು ಭಾಗದ ಭಕ್ತರು ಭಾಗವಹಿಸಿದ್ದರು.
ಇಂದು ಮಧ್ಯಾರಾಧನೆ
ಹೈಕೋರ್ಟ್ ಆದೇಶದನ್ವಯ ನವ ವೃಂದಾವನಗಡ್ಡೆಯಲ್ಲಿ ಮಂಗಳವಾರ ಉತ್ತರಾಧಿ ಮಠದಿಂದ ಕವೀಂದ್ರತೀರ್ಥರ ಪೂರ್ವಾರಾಧನೆ ಜರುಗಿತು. ಬುಧವಾರ ಮಧ್ಯಾರಾಧನೆ ನಿಮಿತ್ತ ರಾಮನವಮಿ ಪ್ರಯುಕ್ತ ದಿಗ್ವಿಜಯ ಮೂಲರಾಮಚಂದ್ರ ದೇವರಿಗೆ ಸೀತಾ ದೇವಿಗೆ ಶ್ರೀಗಳಿಂದ ಪಂಚಾಮೃತಭಿಷೇಕ ಜರುಗಲಿದೆ. ಇನ್ನುಳಿದ ಕಾರ್ಯಕ್ರಮಗಳು ಮಧ್ಯಾಹ್ನ 1 ಗಂಟೆ ಒಳಗಾಗಿ ಮುಗಿಯಲಿವೆ. ಹಾಗಾಗಿ ಎಲ್ಲ ಭಕ್ತರು ಮಧ್ಯಾರಾಧನೆಗೆ ಆಗಮಿಸಿ ಯತಿಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಸನ್ನಾಚಾರ್ಯ ಕಟ್ಟಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.