ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ನಿರ್ಗತಿಕರ ಅನ್ನದಾತ ಅಶ್ವಿನ್ ಚಾಂಗಡಾ

Last Updated 1 ಜನವರಿ 2021, 0:36 IST
ಅಕ್ಷರ ಗಾತ್ರ

ನಿರ್ಗತಿಕರ ಅನ್ನದಾತ ಅಶ್ವಿನ್

ಕೊಪ್ಪಳ: ಲಾಕ್‌ಡೌನ್‌ ಸಮಯದಲ್ಲಿ ನಗರದ ಬಹುತೇಕ ಹೋಟೆಲ್, ಉದ್ಯಮ ಸೇರಿದಂತೆ ಎಲ್ಲ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಜನಸಾಮಾನ್ಯರ ಗೋಳು ಹೇಳತೀರದಾಗಿತ್ತು. ಇದನ್ನು ಅರಿತ ಉದ್ಯಮಿ, ಭಾರತೀಯ ಜೈನ್ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಶ್ವಿನ್‌ ಚಾಂಗಡಾ ಅವರು ಜನರಿಗೆ ನೆರವಾದರು.

ಲಾಕ್‌ಡೌನ್‌ ವೇಳೆ ರೋಗಿಗಳು ಮತ್ತು ಪೊಲೀಸರಿಗೆ ಸಕಾಲಕ್ಕೆ ಊಟ ಸಿಗುತ್ತಿರಲಿಲ್ಲ. ಆಗ 300 ಜನರಿಗೆ ಅವರು ಇರುವ ಸ್ಥಳಕ್ಕೆ ಊಟ ತಲುಪಿಸಿದರು. ಸರ್ಕಾರಿ ಆಸ್ಪತ್ರೆ,ಕೋವಿಡ್‌ ಕೇರ್‌ಕೇಂದ್ರಗಳಿಗೂ ಊಟಕಳಿಸಿದರು.

100ಕ್ಕೂ ಹೆಚ್ಚು ಕಾರ್ಮಿಕರಿಗೆ ತಮ್ಮ ಗೋದಾಮಿನಲ್ಲಿ ವಸತಿ, ಊಟದ ವ್ಯವಸ್ಥೆ ಮಾಡಿದರು. ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ, ಬಸ್– ರೈಲು ಆರಂಭವಾಗುವವರೆಗೆ ಉತ್ತರ ಭಾಗದ ಕಾರ್ಮಿಕರಿಗೆ ಆಶ್ರಯ ನೀಡಿದರು.

ನಗರದಲ್ಲಿ ವಿವಿಧ ಸಮಾಜ ಸೇವಾ ಕಾರ್ಯಗಳಲ್ಲಿ ಸದಾ ಮಂಚೂಣಿಯಲ್ಲಿರುವ ಅವರು ಗೋ ಸೇವೆ, ಬಡವರಿಗೆ ಅನ್ನದಾನದಲ್ಲಿ ಸದಾ ಮುಂದು. ‘ಕೊರೊನಾ ಲಾಕ್‌ಡೌನ್‌ನಲ್ಲಿ ಬಡವರು, ನಿರ್ಗತಿಕರು ಅಲ್ಲದೇ ಕೊರೊನಾ ವಾರಿಯರ್ಸ್‌ ತುಂಬಾ ಕಷ್ಟ ಅನುಭವಿಸಿದರು. ಅವರಿಗೆ ಊಟದ ವ್ಯವಸ್ಥೆ ಮಾಡಲಾಯಿತು. ಕುಟುಂಬ ಸದಸ್ಯರು ಸಹಕರಿಸಿದ್ದರಿಂದ ಜನರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯವಾಯಿತು. ಈ ಎಲ್ಲಾ ಕಾರ್ಯಗಳನ್ನು ಆತ್ಮತೃಪ್ತಿಗಾಗಿ ಮಾಡಿದ್ದೇವೆ' ಎಂದು ಅಶ್ವಿನ್‌ ಚಾಂಗಡಾ ವಿನಮ್ರವಾಗಿ ಹೇಳುತ್ತಾರೆ.

‘ಹಸಿವಿನಿಂದ ಯಾರೂ ಬಳಲದಿರಲಿ’

ಗಂಗಾವತಿ: ಉದ್ಯಮಿ, ಆಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಕಳಕನಗೌಡ ಪಾಟೀಲ ಕಲ್ಲೂರು ಅವರು ಕೊರೊನಾ ತೀವ್ರವಾಗಿ ವ್ಯಾಪಿಸಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ 40 ಸಾವಿರಕ್ಕೂ ಹೆಚ್ಚು ಮಾಸ್ಕ್‌ಗಳನ್ನು ವಿತರಿಸಿದರು. ಅಷ್ಟೇ ಅಲ್ಲದೇ, ಸಂಕಷ್ಟದ ಸ್ಥಿತಿಯಲ್ಲಿರುವವರಿಗೆ ವಿವಿಧ ಸ್ವರೂಪಗಳಲ್ಲಿ ನೆರವಾದರು.

ಲಾಕ್‌ಡೌನ್ ವೇಳೆ ಹೋಟೆಲ್‌, ವಹಿವಾಟು ಸ್ಥಗಿತಗೊಂಡ ಸಂದರ್ಭದಲ್ಲಿ ಮೂರು ತಿಂಗಳವರೆಗೆ ಕೊರೊನಾ ವಾರಿಯರ್ಸ್‌ಗಳಿಗೆ, ಬಡವರಿಗೆ, ನಿರ್ಗತಿಕರಿಗೆ, ವೃದ್ಧರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಿದರು. ಹಣ್ಣು, ಬಿಸ್ಕಿಟ್‌ಗಳನ್ನು ನೀಡಿದರು.

ಪೊಲೀಸ್‌ ಇಲಾಖೆಯ ಕರ್ತವ್ಯಕ್ಕೆ ನೆರವಾಗಲು ತಮ್ಮ ಎರಡು ಜೀಪುಗಳನ್ನು ನೀಡಿದರು. ಸರ್ಕಾರದ ಕಾರ್ಯಗಳಿಗೆ ಕೈಜೋಡಿಸಿದರು. ಗಂಗಾವತಿ ತಾಲ್ಲೂಕಿನಲ್ಲಿ ಯಾರೂ ಸಹ ಹಸಿವಿನಿಂದ ಬಳಲದಿರಲಿ ಎಂದು ಕಾಳಜಿ ತೋರಿದರು. ನಗರಗಳಿಂದ ಗ್ರಾಮಕ್ಕೆ ಮರಳಿದ ಕೂಲಿಕಾರ್ಮಿಕರಿಗೆ ಧನ ಸಹಾಯ ಸೇರಿದಂತೆ ಊಟ, ಬಟ್ಟೆ, ಕಿಟ್ ನೀಡಿದರು.

‘ನಿಸ್ವಾರ್ಥ ಸೇವೆ ಮಾಡಿದರೆನಮಗೇಪ್ರತಿಫಲ ಸಿಗುತ್ತದೆ. ಸಮಾಜ ಸೇವೆಗೆ ಸಮಾಜ ಸೇವಕನೇ ಆಗಬೇಕಿಲ್ಲ. ಸಹಾಯ ಮಾಡುವ ಮನಸ್ಸಿರಬೇಕು ಮತ್ತು ಕಷ್ಟಕ್ಕೆ ಮಿಡಿಯುವ ಹೃದಯ ಹೊಂದಿರಬೇಕು’ ಎಂಬುದು ಕಳಕನಗೌಡ ಪಾಟೀಲ ಅವರಮನದಾಳ.

* ವರದಿ: ಸಿದ್ದನಗೌಡ ಪಾಟೀಲ, ಕೆ.ಶಿವಕುಮಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT