ಗಂಗಾವತಿ: ನಗರದ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗದುಕೊಳ್ಳಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಶಾಸಕ ಪರಣ್ಣ ಮುನವಳ್ಳಿ ಅವರ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿದರು.
ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೆಲ ತಿಂಗಳವರೆಗೆ ಕಾಲೇಜ್ ಬಂದ್ ಮಾಡಲಾಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ಆರಂಭ ಮಾಡಲಾಗಿದೆ. ನಿಮಯಗಳಿಗನುಸಾರ ಕಾಲೇಜಿನಲ್ಲಿ ಬಿ.ಎ, ಬಿ.ಕಾಂ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ ಬಿ.ಎಸ್ಸಿ ವಿಭಾಗದ ಸಿಬಿಝಡ್ ಕಾಂಬಿನೇಷನ್ ವಿದ್ಯಾರ್ಥಿಗಳಿಗೆ ಇದುವರೆಗೂ ತರಗತಿಗಳನ್ನು ತೆಗೆದುಕೊಂಡಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.
ಮುಂದಿನ ತಿಂಗಳು ಪರೀಕ್ಷೆಗಳಿವೆ. ಆದರೂ ಕಾಲೇಜಿನ ಪ್ರಾಂಶುಪಾಲರು ತರಗತಿಗಳನ್ನು ಆರಂಭಿಸಲು ಆಸಕ್ತಿ ತೋರುತ್ತಿಲ್ಲ. ಉಪನ್ಯಾಸಕರು ಇಲ್ಲ ಎಂದು ಹೇಳುತ್ತಿದ್ದಾರೆ. ಕೂಡಲೇ ಶಾಸಕರು ತರಗತಿಗಳನ್ನು ಆರಂಭಿಸುವಂತೆ ಸೂಚನೆ ನೀಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಕಾಲೇಜಿನ ವಿದ್ಯಾರ್ಥಿಗಳಾದ ವೀಣಾ, ಸ್ವಾತಿ, ದಿವ್ಯ, ಶಾಂತಾ, ಚೈತ್ರಾ, ಮಮತಾ, ಪವಿತ್ರಾ, ಪವನಕುಮಾರ ಹಾಗೂ ಶಿವಕುಮಾರ ಇದ್ದರು.