ತಾವರಗೇರಾ: ಸೋಮವಾರದಿಂದ ಬಸ್ ಸಂಚಾರ ಆರಂಭವಾಗಲಿದ್ದು, ಸಂಚಾರ ನಿಯಂತ್ರಣಾಧಿಕಾರಿ ಮಹಾಂತೇಶ ಅವರು ಭಾನುವಾರ ಸ್ಥಳೀಯರ ನೆರವಿನಿಂದ ಬಸ್ ನಿಲ್ದಾಣ ಸ್ವಚ್ಛಗೊಳಿಸಿದರು.
ಮಹಾಂತೇಶ ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ಘೋಷಣೆಯಾದ ಬಳಿಕ ಬಸ್ ನಿಲ್ದಾಣ ಬಂದ್ ಮಾಡಲಾಗಿತ್ತು. ಸ್ವಚ್ಛತೆ ಮರೀಚಿಕೆಯಾಗಿತ್ತು. ಇದನ್ನು ಗಮನಿಸಿದ ನಿಯಂತ್ರಣಾಧಿಕಾರಿ ಮಹಾಂತೇಶ ಭಾನುವಾರ ಬೆಳಿಗ್ಗೆ ಶ್ರಮದಾನ ಮಾಡಿದರು.
ಸ್ಥಳೀಯರಾದ ಮಹಿಬೂಬ ಕೂಲಿ, ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಆಟೊ ಚಾಲಕರ ಸಂಘದ ಅಧ್ಯಕ್ಷ್ಷ ಗರೀಬ್ಪಾಷಾ ಕೂಲಿ, ಶ್ಯಾಮರಾಜ ಕಲಾಲ, ಶರಣೆಗೌಡ, ಬಾಜಾಖಾನ, ಬಸವರಾಜ ಕುಂಬಾರ ಅವರು ಕೈಜೋಡಿಸಿದರು. ಕಸಗುಡಿಸಿ, ಟ್ಯಾಂಕರ್ ನೀರು ಹಾಕಿ, ಇಡೀ ಆವರಣ ಸ್ವಚ್ಛ ಮಾಡಲಾಯಿತು.
‘ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಹೆಚ್ಚು ಕಸ ಸಂಗ್ರಹವಾಗಿತ್ತು. ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿತ್ತು. ಪ್ರಯಾಣಿಕರ ಆಸನಗಳ ಮೇಲೆ ಉಗುಳಲಾಗಿತ್ತು. ಅದನ್ನು ಸ್ವಚ್ಛ ಮಾಡಲಾಯಿತು’ ಎಂದು ಹೇಳಿದರು.
‘ಸೋಮವಾರ ಬಸ್ ಸಂಚಾರ ಆರಂಭಿಸಲು ಸರ್ಕಾರ ಅವಕಾಶ ನೀಡಿದೆ. ಮಾರ್ಗಸೂಚಿ ಪಾಲಿಸುವ ಮೂಲಕ ಆರಂಭಿಸಲಾಗುವುದು’ ಎಂದು ನಿಯಂತ್ರಣಾಧಿಕಾರಿ ಮಹಾಂತೇಶ ತಿಳಿಸಿದರು.