ಯಲಬುರ್ಗಾ: ತಾಲ್ಲೂಕಿನ ಕರಮುಡಿ, ಬಂಡಿಹಾಳ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನದಿಂದ ಸಂಜೆವರೆಗೂ ಮಳೆ ಸುರಿಯಿತು.
ಹಳ್ಳಗಳು ತುಂಬಿ ಹರಿದವು. ದುಡಿಯಲು ಹೋಗಿದ್ದ ಕಾರ್ಮಿಕರು ಹೊಲಗಳಲ್ಲಿಯೇ ಉಳಿಯಬೇಕಾಯಿತು.
‘ಕಾರ್ಮಿಕರನ್ನು ಕರೆತಂದಿದ್ದ ಟ್ರ್ಯಾಕ್ಟರ್ ಹಳ್ಳದಲ್ಲಿ ಕೊಚ್ಚಿ ಹೋಯಿತು. ಬಹುತೇಕ ಕಾರ್ಮಿಕರು ಭಯಗೊಂಡು ಟ್ರ್ಯಾಕ್ಟರ್ ಹತ್ತದೆ ದಡದಲ್ಲಿ ಉಳಿದುಕೊಂಡಿದ್ದರಿಂದ ಪ್ರಾಣಾಪಾಯ ಸಂಭವಿಸಲಿಲ್ಲ. ಚಾಲಕ ಹಾರಿ ದಡ ಸೇರಿದ್ದಾನೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಯಲಬುರ್ಗಾ ಪಿಎಸ್ಐ ಶಿವಕುಮಾರ ಮುಗ್ಗಳ್ಳಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಅಗ್ನಿಶಾಮಕ ಸಿಬ್ಬಂದಿ ಸಹಾಯ ಪಡೆದು ಕಾರ್ಮಿಕರನ್ನು ಹಳ್ಳ ದಾಟಿಸಿದರು.