ಹನುಮಸಾಗರ: ಹಿಂದುಳಿದ ವರ್ಗದ ಹರಿಕಾರ ಎನಿಸಿಕೊಂಡಿರುವ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಹಿಂದುಳಿದ ಜನಾಂಗದ ಏಳಿಗೆಗಾಗಿ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಿದ್ದಾರೆ ಎಂದು ವಿಶ್ವಚೇತನ ಸಂಸ್ಥೆಯ ಆಡಳಿತಾಧಿಕಾರಿ ವೀರೇಶ ವಿಶ್ವಕರ್ಮ ಹೇಳಿದರು.
ಗುರುವಾರ ಇಲ್ಲಿನ ವಿಶ್ವಚೇತನ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 56ನೆ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜ ಬದಲಾವಣೆಯಾಗಿ ಸಂಪೂರ್ಣ ಸಮಾನತೆಯಿಂದ ಕೂಡಿರಲಿ ಎಂಬ ಉದ್ದೇಶದಿಂದಲೇ ಹಿಂದುಳಿದ ಜನಾಂಗಕ್ಕೆ ವಿಶೇಷ ಅವಕಾಶಗಳನ್ನು ನೀಡಿದ್ದರೂ ಅವರ ಉದ್ದೇಶ ಈಗಲೂ ಸಂಪೂರ್ಣ ಈಡೇರದೆ ಇರುವುದು ವಿಷಾದನೀಯ ಎಂದು ಅಭಿಪ್ರಾಯಪಟ್ಟರು.
ಭಾರತ ಕಂಡ ಅಪರೂಪದ ವ್ಯಕ್ತಿಯಾಗಿದ್ದ ಡಾ.ಅಂಬೇಡ್ಕರ್ ಆಗಿನ ಸಂದರ್ಭದಲ್ಲೂ ಸಾಕಷ್ಟು ಅಧ್ಯಯನ ಮಾಡಿ ಮೇಲ್ಮಟ್ಟಕ್ಕೆ ಬಂದವರಾಗಿದ್ದಾರೆ. ಅವರ ವ್ಯಕ್ತಿತ್ವ, ಬದುಕು, ಬೆಳವಣಿಗೆ ಯುವ ಪೀಳಿಗೆಗೆ ಯಾವತ್ತೂ ಮಾದರಿ ಎಂದು ಹೇಳಿದರು.
ಕಾರ್ಯಕ್ರಮ ಕುರಿತು ವಿದ್ಯಾರ್ಥಿಗಳು ಮಾತನಾಡಿದರು
ಅಬ್ದುಲ್ರಜಾಕ್, ಮುತ್ತಣ್ಣ ಪೂಜಾರಿ ಹಾಗೂ ಶಾಲಾ ಸಿಬ್ಬಂದಿ ಇದ್ದರು.
ಗ್ರಾಮ ಪಂಚಾಯಿತಿ: ಗ್ರಾಮ ಪಂಚಾಯಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಧರಿಯಾಬಿ ಬಳೂಟಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ದಲಿತ ಮುಖಂಡರಾದ ಸೂಚಪ್ಪ ಭೂವಿ, ಚಂದಪ್ಪ ಗುಡಗಲದಿನ್ನಿ, ಗ್ರಾಮ ಪಂಚಾಯತಿ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾ, ಹಾಗೂ ಯುವಕರು ಇದ್ದರು.
ಅನ್ನದಾನೇಶ್ವರ ಶಾಲೆ: ಡಾ.ಅಂಬೇಡ್ಕರ್ ಪುಣ್ಯ ತಿಥಿ ಅಂಗವಾಗಿ ಅನ್ನದಾನೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶರಣಪ್ಪ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಮಹೇಶ ಮಠಪತಿ ಅಂಬೇಡ್ಕರ ಅವರ ಜೀವನ ಚರಿತ್ರೆ ಕುರಿತು ಮಾತನಾಡಿದರು. ಶಾಲಾ ಸಿಬ್ಬಂದಿ ಹಾಜರಿದ್ದರು.