ಮಂಡ್ಯ: ಗ್ರಾಮೀಣ ಜನರು ತಂತ್ರಜ್ಞಾನ ಅಳವಡಿಸಿಕೊಂಡರೆ ಗ್ರಾಮಗಳು ಅಭಿವೃದ್ಧಿಯಾಗುತ್ತವೆ ಎಂದು ಜೈವಿಕ ಇಂಧನ ಪಿತಾಮಹ ಡಾ. ಉಡುಪಿ ಶ್ರೀನಿವಾಸ್ ಹೇಳಿದರು.
ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಭಾಂಗಣದಲ್ಲಿ ಸೋಮವಾರ ನಡೆದ, ಟೆಕ್ಕಿಪ್ ಅನುದಾನದಲ್ಲಿ ‘ನವೀಕರಿಸಬಹುದಾದ ಇಂಧನ ಮೂಲಗಳು–ಉದಯೋನ್ಮುಖ ತಂತ್ರ ಜ್ಞಾನಗಳು’ ಎಂಬ ವಿಷಯದ ಬಗ್ಗೆ ಒಂದು ವಾರದ ಎಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕರ ಜ್ಞಾನಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನದ ಜತೆಗೆ ಜೈವಿಕ ಇಂಧನದ ಬಗ್ಗೆ ಗ್ರಾಮೀಣರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಜೈವಿಕ ಇಂಧನ ಬಳಸುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ, ಹಾಗಾಗಿ, ಪಟ್ಟಣದ ಪ್ರದೇಶದವರ ಜತೆಗೆ ಗ್ರಾಮೀಣ ಪ್ರದೇಶದವರು ಸಹ ಜೈವಿಕ ಇಂಧನ ಬಳಕೆ ಮಾಡಬೇಕು ಎಂದು ಸಲಹೆ ಮಾಡಿದರು.
ವಿಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಎಂಬುದು ಪಟ್ಟಣಕ್ಕೆ ಸೀಮಿತವಾಗಿರದೆ, ಗ್ರಾಮೀಣ ಪ್ರದೇಶಕ್ಕೂ ವಿಸ್ತಾರವಾಗಬೇಕು. ಸರ್ಕಾರ ಜೈವಿಕ ಇಂಧನಕ್ಕೆ ಪ್ರೋತ್ಸಾಹ ನೀಡಬೇಕು. ಜತೆಗೆ ಪ್ರಚಾರ ಕೈಗೊಳ್ಳಬೇಕು. ಇದರಿಂದ ಜೈವಿಕ ಇಂಧನ ಬಳಕೆಯಾಗಿ, ಜೈವಿಕ ಇಂಧನ ಬೇಡಿಕೆ ಹೆಚ್ಚುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ, ಪಿಇಟಿ ಅಧ್ಯಕ್ಷ ಡಾ.ಎಚ್.ಡಿ. ಚೌಡಯ್ಯ ಮಾತನಾಡಿ, ಜೈವಿಕ ಇಂಧನದ ಮಾಹಿತಿಯ ಕಾರ್ಯಾಗಾರದಲ್ಲಿ ಭಾಗವಹಿಸ ಬೇಕು. ಇದರಿಂದ ಜೈವಿಕ ಇಂಧನದ ಮಹತ್ವ ತಿಳಿದುಕೊಳ್ಳಬಹುದು ಎಂದರು.
ಡಾ.ಸಿ.ಜೆ ಗಂಗಾಧರಗೌಡ, ಡಾ.ವಿ. ಶ್ರೀಧರ್, ಡಾ.ಎಚ್.ವಿ ರವೀಂದ್ರ, ಡಾ.ಎಸ್.ಎಲ್. ಅಜಿತ್ ಪ್ರಸಾದ್ ಉಪಸ್ಥಿತರಿದ್ದರು.