ನಾಗಮಂಗಲ: ರೈತರೊಬ್ಬರು ತಮ್ಮ ಜಮೀನಿನಲ್ಲಿ ನೆಡಲು ತಂದಿದ್ದ 5,000 ಬಾಳೆ ಸಸಿಗಳಿಗೆ ದುಷ್ಕರ್ಮಿಗಳು ಕಳೆನಾಶಕ ಸಿಂಪಡಣೆ ಮಾಡಿ ನಾಶಪಡಿಸಿದ್ದಾರೆ.
ತಾಲ್ಲೂಕಿನ ಬೆಳ್ಳೂರು ಹೋಬಳಿಯ ತಿಗಳನಹಳ್ಳಿ ಗ್ರಾಮದ ರೈತ ಜಗದೀಶ್ ದಾಸನಕೆರೆ ಬಳಿ ಇರುವ ಜಮೀನಿನಲ್ಲಿ ನೆಡಲು ಆಂಧ್ರಪ್ರದೇಶದಿಂದ ಒಂದು ಲಕ್ಷ ಮೌಲ್ಯದ ಬಾಳೆ ಸಸಿಗಳನ್ನು ತಂದಿದ್ದರು. ಸ್ಥಳೀಯ ಹವಾಗುಣಕ್ಕೆ ಹೊಂದಾಣಿಕೆಯಾಗಲಿ ಎಂದು ಗೋದಾಮಿನಲ್ಲಿ ಇಟ್ಟಿದ್ದರು. ಸಸಿಗಳನ್ನು ನೆಡಲು ರೈತ ಬಾಗಿಲು ತೆಗೆದು ನೋಡಿದಾಗ ಸಸಿಗೆ ಕಳೆನಾಶಕ ಸಿಂಪಡಣೆ ಮಾಡಿರುವುದು ಬೆಳಕಿಗೆ ಗೊತ್ತಾಗಿದೆ.
ಘಟನೆ ಕುರಿತು ರೈತ ಸಂಘದ ರಂಗೇಗೌಡ ಮಾತನಾಡಿ, ‘ತಿನ್ನುವ ಅನ್ನಕ್ಕೆ ವಿಷ ಇಡುವ ಕೆಲಸವನ್ನು ಯಾರೂ ಮಾಡಬಾರದು. ಎಷ್ಟೇ ದ್ವೇಷವಿದ್ದರೂ ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದು. ಇಂತಹ ಕೃತ್ಯ ನಡೆಸಿದವರಿಗೆ ಶಿಕ್ಷೆಯಾಗಬೇಕು ಮತ್ತು ರೈತನಿಗೆ ನ್ಯಾಯ ಸಿಗಬೇಕು’ ಎಂದು ಆಗ್ರಹಿಸಿದ್ದಾರೆ.