ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ವೇದಿಕೆ ವಿನ್ಯಾಸಕ್ಕೆ ಕಲಾತ್ಮಕ ರೂಪ

Published 19 ನವೆಂಬರ್ 2023, 6:17 IST
Last Updated 19 ನವೆಂಬರ್ 2023, 6:17 IST
ಅಕ್ಷರ ಗಾತ್ರ

ಮಂಡ್ಯ: ದಸರಾ, ಸಾಂಸ್ಕೃತಿಕ ಉತ್ಸವ, ಸಭೆ, ಸಮಾರಂಭ, ಸಮ್ಮೇಳನ, ಸಮಾವೇಶಗಳಿಗೆ ಕಲಾತ್ಮಕವಾಗಿ ವೇದಿಕೆ ವಿನ್ಯಾಸ ಮಾಡಿಕೊಡುವ ದಿಲೀಪ್‌ ದೇಶಹಳ್ಳಿ ಅವರು ಕಳೆದ 2 ದಶಕಗಳಿಂದಲೂ ಜಿಲ್ಲೆಯ ಜನರಿಗೆ ಚಿರಪರಿಚಿತರಾಗಿದ್ದಾರೆ.

ಸ್ಟೇಜ್‌ ಡಿಸೈನ್‌, ಡಿಜಿಟಲ್‌  ವಿನ್ಯಾಸದ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿರುವ ದಿಲೀಪ್‌ ಅವರು 23 ವರ್ಷಗಳ ಹಿಂದೆ ನಗರದ ಸುಭಾಷ್‌ ನಗರದಲ್ಲಿ ಸ್ಥಾಪಿಸಿರುವ ‘ಕ್ರಿಯೇಟಿವ್‌ ಇಮೇಜಿಂಗ್‌ ಸ್ಟುಡಿಯೊ’ ದೇಸಿ ಸ್ಪರ್ಶದೊಂದಿಗೆ ಮುನ್ನಡೆಯುತ್ತಿದೆ. ಜಿಲ್ಲೆಯಲ್ಲಿ ನಡೆಯುವ ಪ್ರಮುಖ ಸಭೆಗಳಿಗೆ ಅವರು ವಿಶೇಷ ರೀತಿಯಲ್ಲಿ ವೇದಿಕೆ ವಿನ್ಯಾಸ ಮಾಡುತ್ತಾರೆ. ನಾಲ್ಕೈದು ವರ್ಷಗಳಿಂದ ಸ್ಮರಣಿಕೆ, ಟ್ರೋಫಿಗಳ ವಿನ್ಯಾಸ ಹಾಗೂ ತಯಾರಿಕೆಯಲ್ಲೂ ಪ್ರಸಿದ್ಧಿ ಪಡೆದಿದ್ದಾರೆ.

ಮೈಸೂರು, ಶ್ರೀರಂಗಪಟ್ಟಣ ದಸರಾ, ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಸೃಜನಾತ್ಮಕ ಶೈಲಿಯೊಂದಿಗೆ ವೇದಿಕೆ ವಿನ್ಯಾಸ ಮಾಡಿದ್ದಾರೆ. ಸಾಹಿತ್ಯ ಕುರಿತಾದ ಸಮಾರಂಭಗಳಿಗೆ ಪುಸ್ತಕ ಪ್ರೀತಿ ಮೂಡಿಸುವ ರೀತಿಯಲ್ಲಿ ವೇದಿಕೆ ರೂಪಿಸಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬುಟ್ಟಿ, ಬುಜ್ಜಣಿಗೆಯಲ್ಲಿ ಪುಸ್ತಕ ತೆರೆಯುವ ರೀತಿಯಲ್ಲಿ ವೇದಿಕೆ ವಿನ್ಯಾಸ ಮಾಡಿ ಸಾಹಿತ್ಯಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರೈತರ ಕುರಿತಾದ ಸಮಾರಂಭದಲ್ಲಿ ವೇದಿಕೆಗೆ ಜನಪದ ರೂಪ ಕೊಡುತ್ತಾರೆ. ವೇದಿಯಲ್ಲಿ ನೇಗಿಲು ಸೇರಿದಂತೆ ಕೃಷಿ ಉಪಕರಣಗಳನ್ನು ಸೃಷ್ಟಿ ಮಾಡುತ್ತಾರೆ. ಕಣ, ರಾಶಿ, ಭತ್ತದ ತೆನೆ, ಅಡಿಕೆ ಪಟ್ಟಿ, ತೆಂಗಿನ ಗರಿಗಳನ್ನು ಬಳಸಿ ವೇದಿಕೆಗೆ ರೈತ ರೂಪ ನೀಡುತ್ತಾರೆ. ಮಡಿಕೆಗಳನ್ನು ಬಳಸಿ ವಿಶೇಷ ರೀತಿಯಲ್ಲಿ ವೇದಿಕೆ ರೂಪಿಸುತ್ತಾರೆ.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭುವನೇಶ್ವರಿ ಪ್ರತಿಮೆಯುಳ್ಳ ಸ್ತಬ್ಧಚಿತ್ರ ರೂಪಿಸಿದ್ದಾರೆ. ದೆಹಲಿಯಲ್ಲಿ ನಡೆದ ವಿಶ್ವ ಒಕ್ಕಲಿಗರ ಸಮ್ಮೇಳನದಲ್ಲಿ ಸುಂದರ ವೇದಿಕೆ ರೂಪಿಸಿದ್ದಾರೆ. ನೃತ್ಯ, ಸಂಗೀತ ಕಾರ್ಯಕ್ರಮಗಳಿಗೂ ದೇಸಿ ರೂಪದ ವೇದಿಕೆ ರಚಿಸಿದ್ದಾರೆ. ದಿಲೀಪ್‌ ನಿರ್ದೇಶನದಲ್ಲಿ ಮೂಡಿಬರುವ ವೇದಿಕೆಯಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷಿದ್ಧ. ಹೂವು ಸೇರಿದಂತೆ ನಿತ್ಯದ ಬಳಕೆಯ ವಸ್ತುಗಳನ್ನೇ ಬಳಸಿ ವೇದಿಕೆಗೆ ರೂಪ ಕೊಡುತ್ತಾರೆ.

ಟ್ರೋಫಿ, ಸ್ಮರಣಿಕೆ

ಜಿಲ್ಲೆಯ ವಿವಿಧಡೆ ನಡೆಯುವ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದಿಲೀಪ್‌ ಅವರ ಸಂಸ್ಥೆಯಲ್ಲಿ ಸಿದ್ಧಗೊಳ್ಳಲು ಟ್ರೋಫಿ ಹಾಗೂ ಸ್ಮರಣಿಕೆಗಳನ್ನೇ ಉಡುಗೊರೆಯಾಗಿ ನೀಡಲಾಗುತ್ತದೆ. ಸ್ಮರಣಿಕೆಗಳನ್ನು ಆಕರ್ಷಕವಾಗಿ ವಿನ್ಯಾಸ ಮಾಡುವ ದಿಲೀಪ್‌ ಸಂಘಟನೆಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲೆಯಲ್ಲಿ ನಡೆಯುವ ಹಲವು ಕಾರ್ಯಕ್ರಮಗಳಿಗೆ ದಿಲೀಪ್‌ ಅವರೂ ಪ್ರಾಯೋಜಕತ್ವ ವಹಿಸಿಕೊಳ್ಳುತ್ತಾರೆ. ಸಾಮಾಜಿಕ ಹಿನ್ನೆಲೆಯ ಸಮಾರಂಭಗಳಿಗೆ ರಿಯಾಯಿತಿ ದರದಲ್ಲಿ ಸ್ಮರಣಿಕೆ ನೀಡುತ್ತಾರೆ. ಅಂಬಿಕಪ್‌ ಕಬಡ್ಡಿ ಟೂರ್ನಿಗೆ 170 ಅಡಿಯ ವೇದಿಕೆ ರೂಪಿಸಿ ದಾಖಲೆ ಬರೆದಿದ್ದಾರೆ. ಮಂಡ್ಯ ಹಾಗೂ ಮದ್ದೂರಿನಲ್ಲಿ ಕ್ರಿಯೇಟಿವ್‌  ಕಚೇರಿಗಳಿವೆ. ಕಚೇರಿ ಕಟ್ಟಡಗಳಿಗೂ ಜನಪದ, ದೇಸಿ ಬಣ್ಣಗಳ ಮೂಲಕ ಕಲಾತ್ಮಕ ರೂಪ ನೀಡಿರುವುದು ಆಕರ್ಷಕವಾಗಿದೆ.

ಪುಸ್ತಕಗಳ ಮುಖಪುಟ ವಿನ್ಯಾಸ, ಆಹ್ವಾನ ಪತ್ರಿಕೆಗಳಿಗೆ ರೂಪ, ಡಿಜಿಟಲ್‌ ಪ್ರಿಂಟ್‌ನಲ್ಲೂ ಕೆಲಸ ಮಾಡುತ್ತಿದ್ದಾರೆ. ದಿಲೀಪ್‌ ಸಂಪರ್ಕ ಸಂಖ್ಯೆ; 9844004004.

22ರಂದು 23ನೇ ವಾರ್ಷಿಕೋತ್ಸವ

ಕ್ರಿಯೇಟಿವ್‌ ಇಮೇಜಿಂಗ್‌ ಸಂಸ್ಥೆ ನ.22ರಂದು 23 ವರ್ಷ ಪೂರೈಸುತ್ತಿದ್ದು ನಗರದ ಕಚೇರಿಯಲ್ಲಿ ವಾರ್ಷಿಕೋತ್ಸವ ಸಮಾರಂಭ ಆಯೋಜಿಸಲಾಗಿದೆ. ಸುಭಾಷ್‌ನಗರ 1ನೇ ಕ್ರಾಸ್‌ನಲ್ಲಿರುವ ಕಚೇರಿಯಲ್ಲಿ ಅಂದು ಸರಳ ಸಮಾರಂಭ ನಡೆಯಲಿದೆ. ಸಂಸ್ಥೆಯು 2 ದಶಕದಿಂದ ನೂರಾರು ವಿನ್ಯಾಸಕಾರರು ಕಲಾವಿದರಿಗೆ ಬದುಕು ನೀಡಿದೆ. ವಾರ್ಷಿಕೋತ್ಸವದ ದಿನ ಎಲ್ಲರೂ ಜೊತೆಯಾಗಲಿದ್ದಾರೆ. ‘ವೇದಿಕೆ ಎಂದೊಡನೆ ಇಂದು ಎಲ್‌ಇಡಿ ಪರದೆಗಳೇ ರಾರಾಜಿಸುತ್ತವೆ. ಇಂತಹ ಸಂದರ್ಭದಲ್ಲಿ ನಾವು ದೇಸಿ ಜನಪದ ಸ್ಪರ್ಶದೊಂದಿಗೆ ಜನರಿಗೆ ಇಷ್ಟವಾಗುವ ರೀತಿಯಲ್ಲಿ ವೇದಿಕೆ ವಿನ್ಯಾಸ ಮಾಡುತ್ತಿದ್ದೇವೆ’ ಎಂದು ದಿಲೀಪ್‌ ದೇಶಹಳ್ಳಿ ಹೇಳಿದರು.

ಸಿದ್ಧಗೊಂಡಿರುವ ಟ್ರೋಫಿಗಳು
ಸಿದ್ಧಗೊಂಡಿರುವ ಟ್ರೋಫಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT