ಮಂಡ್ಯ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ವಿರುದ್ಧ ಲಘುವಾಗಿ ಮಾತನಾಡಿದ್ದು, ಬಾಯಿಗೆ ಬೀಗ ಹಾಕುವಂತೆ ಅವರಿಗೆ ತಿಳಿಹೇಳಿ ಎಂದು ಬಿಜೆಪಿ ಕಾರ್ಯಕರ್ತರು ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಅಂಚೆ ಮೂಲಕ ಮನವಿ ರವಾನಿಸಿ ಮಂಗಳವಾರ ಒತ್ತಾಯಿಸಿದರು.
ನಗರದ ಜಿಲ್ಲಾ ಅಂಚೆ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಘೋಷಣೆ ಕೂಗಿದರು. ನಂತರ ಅಂಚೆ ಮೂಲಕ ರಾಷ್ಟ್ರೀಯ ಅಧ್ಯಕ್ಷ ಸೇರಿದಂತೆ ರಾಜ್ಯ ಘಟಕದ ಬಿ.ವೈ.ವಿಜಯೇಂದ್ರ ಅವರಿಗೆ ಪತ್ರ ಬರೆದು ಚಳವಳಿ ನಡೆಸಿದರು.
ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ವಿರುದ್ಧ ದುರ್ವರ್ತನೆ ತೋರುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ವರಿಷ್ಠರು ಬುದ್ದಿಹೇಳಬೇಕು. ಅವರನ್ನು ಶಕುನಿ ಎಂದು ಟೀಕೆ ಮಾಡಿ ಪಕ್ಷದ ಕಾರ್ಯಕರ್ತರಿಗೆ ಅವಮಾನ ಮಾಡಿದ್ದಾರೆ, ಅವರಿಗೆ ತಿಳಿಹೇಳಬೇಕು, ಇಲ್ಲದಿದ್ದರೆ ಯತ್ನಾಳ್ ಅವರನ್ನು ಸರಿ ದಾರಿಗೆ ತರಲು ಯಡಿಯೂರಪ್ಪರ ಅನುಯಾಯಿಗಳಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಮುಂಬರು ಲೋಕಸಭಾ ಚುನವಾಣೆ ವೇಳೆಗೆ ಯತ್ನಾಳ್ ಹೇಳಿಕೆಗಳು ಗಣನೆಗೆ ಬರುತ್ತವೆ. ಇದಕ್ಕೆ ಅವಕಾಶ ನೀಡಬಾರದು, ಈಗಾಗಲೇ ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತಿರುವ ರಾಜ್ಯದ ಜನರು ಬಿಜೆಪಿ ಮೇಲೆ ಒಲವು ತೋರಿದ್ದಾರೆ, ಇದನ್ನಾದರೂ ಗಮನದಲ್ಲಿಟ್ಟುಕೊಂಡು ಯತ್ನಾಳ್ ಬಾಯಿಗೆ ಬೀಗ ಹಾಕಿಸುವುದು ಸೂಕ್ತವಾಗಿದ್ದು, ಇನ್ನಾದರೂ ಬಿಜೆಪಿ ಇರಿಸು ಮುರಿಸು ತರುವಂತಹ ಹೇಳಿಕೆಗಳನ್ನು ಸ್ವಪಕ್ಷದವರೇ ಮಾಡಬಾರದು ಎಂದು ಒತ್ತಾಯಿಸಿದರು.