ಮಂಡ್ಯ: ಕಾವೇರಿ ಮಡಿಲಿಗೆ ಹೋಗಿ ತೀರ್ಥವನ್ನು ನನ್ನ ಜನ್ಮ ಭೂಮಿಗೆ ತರಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಇದರಿಂದ ರಾಜ್ಯದ ಜನತೆಗೆ ಒಳಿತಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ಕಾಳಿಕಾಂಬ ದೇವಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಕಾವೇರಿ ತೀರ್ಥ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೀರ್ಥೋದ್ಭವದ ಸನ್ನಿವೇಶದಲ್ಲಿ ಕಾವೇರಿ ಉಕ್ಕಿ ಹರಿದ ನೀರು ನೋಡಲು ಸಂತೋಷವಾಯಿತು. ಈ ಕಾವೇರಿ ತಾಯಿ ಆಶೀರ್ವಾದ ಎಲ್ಲರ ಮೇಲಿರಲಿ. ಹಾಗಾಗೀ ಈ ತೀರ್ಥೋದ್ಭವದ ಕಾವೇರಿ ಮಾತೆ ನೀರನ್ನು ಮಂಡ್ಯದ ಭಕ್ತರಿಗೆ ನೀಡಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.
ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲು ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಭೆಗೆ ಆಹ್ವಾನಿಸಿದ್ದು, ರೈತರ ಪರವಾಗಿಯೇ ನಿರ್ಧಾರ ಬರಲಿದೆ.ಮಂಡ್ಯದ ಶಕ್ತಿ ದೇವತೆಯಾದ ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮುಖ್ಯಮಂತ್ರಿ ಅವರು ಆಹ್ವಾನಿಸಿರುವ ಸಭೆಗೆ ಬನ್ನಿ ಎಂದು ತಿಳಿಸಿದರು.
ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಮಾತನಾಡಿ, ಗ್ರಾಮ ದೇವತೆಯ ಸನ್ನಿಧಿಯಲ್ಲಿ ಕಾವೇರಿ ತೀರ್ಥ ವಿನಿಯೋಗ ಹಾಗೂ ಅಭೀಷೇಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಇದು ಪ್ರಥಮ ಕಾರ್ಯಕ್ರಮವಾಗಿದ್ದು, ನಾರಾಯಣಗೌಡರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಈ ಕಾವೇರಿ ತಾಯಿ ಆಶೀ ರ್ವಾದ ಎಲ್ಲರ ಮೇಲಿರಲಿ ಎಂದರು.
ಭಕ್ತರಿಗೆ ಕಾವೇರಿ ತೀರ್ಥ ನೀಡಲಾಯಿತು. ಕಾರ್ಯಕ್ರಮ ದಲ್ಲಿಶಾಸಕ ಎಂ.ಶ್ರೀನಿವಾಸ್, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮೈಷುಗರ್ ಕಾರ್ಖಾನೆ ಅಧ್ಯಕ್ಷ ಶಿವಲಿಂಗೇಗೌಡ, ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಜಿಲ್ಲಾಧಿಕಾರಿ ಎಸ್.ಅಶ್ವತಿ ಇದ್ದರು.