ಮಳವಳ್ಳಿ: ದಿನಸಿ ಖರೀದಿಸುವ ನೆಪದಲ್ಲಿ ಬಂದ ದುಷ್ಕರ್ಮಿಗಳು ಅಂಗಡಿ ಮಾಲೀಕ ಗ್ರಾಮದ ಚಿಕ್ಕೀರೇಗೌಡರ ಕಣ್ಣಿಗೆ ಕಾರದ ಪುಡಿ ಎರಚಿ 35 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ಅಮೃತೇಶ್ವರನಹಳ್ಳಿಯಲ್ಲಿ ನಡೆದಿದೆ.
ಬುಧವಾರ ಮಧ್ಯಾಹ್ನ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳ ಪೈಕಿ ಒಬ್ಬ ದಿನಸಿ ಸಾಮಗ್ರಿ ಖರೀದಿಸುತ್ತಿದ್ದ, ಮತ್ತೊಬ್ಬ ಬೈಕ್ನಲ್ಲಿ ಕುಳಿತು ಅಕ್ಕಪಕ್ಕ ಯಾರೂ ಇಲ್ಲದನ್ನು ಗಮನಿಸುತ್ತಿದ್ದ. ಈ ವೇಳೆ ಕಾರದಪುಡಿ ಎರಚಿ ಸರವನ್ನು ಕಸಿದು ಬೈಕ್ ನಲ್ಲಿ ಇಬ್ಬರು ವೇಗವಾಗಿ ಪರಾರಿಯಾಗಿದ್ದಾರೆ.
ಘಟನೆಯಿಂದ ತೀವ್ರ ಅಘಾತಕ್ಕೊಳಗಾದ ಚಿಕ್ಕಿರೇಗೌಡರ ಚೀರಾಟ ಕೇಳಿ ಅಕ್ಕಪಕ್ಕದವರು ಸ್ಥಳಕ್ಕೆ ಬಂದು ಕಣ್ಣಿಗೆ ನೀರು ಹಾಕಿ, ಮಾಹಿತಿ ಪಡೆದು ಕೆಲ ಯುವಕರು ಬೈಕ್ ನನ್ನೂ ಹಿಂಬಾಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಸ್ಥಳಕ್ಕೆ ಡಿವೈಎಸ್ಪಿ ಎನ್.ನವೀನ್ ಕುಮಾರ್, ಸಿಪಿಐ ಎಂ.ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.