ಮಂಡ್ಯ: ‘ನನ್ನ ಕಟೌಟ್ ಸುಟ್ಟ ಕೂಡಲೇ ನಾನು ಸುಟ್ಟು ಹೋಗುವುದಿಲ್ಲ ಅಥವಾ ನನ್ನನ್ನು ಪ್ರೀತಿಸುವವರು ಸುಟ್ಟು ಹೋಗುವುದಿಲ್ಲ. ಬಿಜೆಪಿಯವರಂಥ ಕೊಳಕರು, ಜಾತಿವಾದಿಗಳು ಯಾರೂ ಸಿಗುವುದಿಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದರು.
ನಗರದಲ್ಲಿ ಸೋಮವಾರ ಮಾತನಾಡಿದ ಅವರು, ‘ಕಾಂಗ್ರೆಸ್ ಅಧಿಕಾರಕ್ಕೆ ಬರುವ ಲಕ್ಷಣ ರಾಜ್ಯದಲ್ಲಿ ಕಾಣತೊಡಗಿದೆ. ಇಂಥ ಸಂದರ್ಭದಲ್ಲಿ ಬಿಜೆಪಿ ಕೊಳಕು ರಾಜಕಾರಣ ಮಾಡುತ್ತಿದೆ. ಯಾರೂ ಬಿಜೆಪಿಗೆ ಸೇರಬಾರದು’ ಎಂದು ಹೇಳಿದರು.
‘ಈ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದಾ’ ಎಂದು ಅವರು ಕೇಳಿದಾಗ ಸಭಿಕರು ‘ಹೌದು ಹುಲಿಯಾ’ ಎಂದು ಹೇಳಿ ಚಪ್ಪಾಳೆ ತಟ್ಟಿದರು.
‘ಸಂವಿಧಾನ ಬದಲಾವಣೆ ಮಾಡಲಾಗುವುದು ಎಂದ ಪಕ್ಷಕ್ಕೆ ಹಲವರು ಹೋಗುತ್ತಿದ್ದಾರೆ ಎಂದು ಭಾಷಣದಲ್ಲಿ ನಾನು ಹೇಳಿದ್ದನ್ನು ಬಿಜೆಪಿ ತಿರುಚಿ ಅಪಪ್ರಚಾರ ಮಾಡುತ್ತಿದೆ. ಬಿಜೆಪಿ ಹಿಂದುಳಿದ ಜಾತಿಯ ವಿರೋಧಿ ಪಕ್ಷ. ಎಲ್ಲ ಜಾತಿಯ ಬಡವರ ಅಭಿವೃದ್ಧಿಯೇ ನನ್ನ ಆಯ್ಕೆ. ಎಲ್ಲ ಜಾತಿಯ ನಾಯಕರ ಜಯಂತಿ ಮಾಡಿದ್ದೇನೆ. ಜಾತಿವಾದಿ ಆಗಿದ್ದರೆ ಒಂದೇ ಜಾತಿಗೆ ಸೀಮಿತವಾಗಿರುತ್ತಿದ್ದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.