ಮದ್ದೂರು ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಸಂಗೀತಕ್ಕೆ ನೃತ್ಯ ಮಾಡಿದ ಹಿಂದುತ್ವ ಪರ ಕಾರ್ಯಕರ್ತರು
ಮೆರವಣಿಗೆಯಲ್ಲಿ ರೆಬೆಲ್ಸ್ಟಾರ್ ಅಂಬರೀಶ್ ಕಟೌಟ್ ಗಮನ ಸೆಳೆಯಿತು
ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಗೆ ಜೋಡಿಬಸವ ಮತ್ತು ಗಾರುಡಿ ಗೊಂಬೆಗಳ ಪ್ರದರ್ಶನ ಮೆರುಗು ನೀಡಿತು
ಮದ್ದೂರು ಪಟ್ಟಣದ ಹೊರವಲಯದ ಶಿಂಷಾ ನದಿಯಲ್ಲಿ ಬುಧವಾರ ಸಂಜೆ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು
‘ಮದ್ದೂರು ಹೊತ್ತಿ ಉರಿಯುವಾಗ ವಿದೇಶ ಪ್ರವಾಸದಲ್ಲಿರುವ ಶಾಸಕ’
‘ಮದ್ದೂರು ಘಟನೆಯನ್ನು ಗೃಹ ಸಚಿವರು ಸಣ್ಣಪುಟ್ಟ ಘಟನೆ ಅನ್ನುತ್ತಾರೆ. ನಿಮ್ಮ ಸ್ಥಾನಕ್ಕೆ ಗೌರವವಿದ್ರೆ ಮದ್ದೂರಿಗೆ ಬನ್ನಿ. ನಿಮ್ಮ ಶಾಸಕರಿಗೆ ಸ್ವಲ್ಪವೂ ಜವಾಬ್ದಾರಿ ಇಲ್ಲ ಕ್ಷೇತ್ರದ ಬಗ್ಗೆ ಕಾಳಜಿ ಇಲ್ಲ. ಮದ್ದೂರು ಪಟ್ಟಣ ಹೊತ್ತಿ ಉರಿಯುವ ವೇಳೆ ಶಾಸಕರು ವಿದೇಶ ಪ್ರವಾಸದಲ್ಲಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು. ‘ಸರ್ಕಾರಕ್ಕೆ ಸ್ವಲ್ಪನಾದ್ರು ಮಾನ ಮರ್ಯಾದೆ ಇದ್ರೆ ದೇಶದ್ರೋಹಿಗಳ ವಿರುದ್ದ ಕ್ರಮಕೈಗೊಳ್ಳಬೇಕು. ಗೂಂಡಾ ಕಾಯ್ದೆ ಹಾಕಿ ಕ್ರಮ ಜರುಗಿಸಬೇಕು. ಹಿಂದೂ ಕಾರ್ಯಕರ್ತರು ಭಯ ಪಡುವ ಅವಶ್ಯಕತೆ ಇಲ್ಲ. ನಾವು ಹಿಂದೂ ಸಂಘಟನೆ ಪರ ಇದ್ದೇವೆ. ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು’ ಎಂದು ಆಗ್ರಹಿಸಿದರು.
‘ಹಿಂದೂಗಳ ತಾಳ್ಮೆ ಪರೀಕ್ಷಿಸಬೇಡಿ’
ಶಾಸಕ ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಓಲೈಕೆ ರಾಜಕೀಯ ಮಾಡ್ತಾ ಇದೆ. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ. ಪೊಲೀಸ್ ಠಾಣೆಯನ್ನು ಸುಡಲು ಹೋದವರು ಮುಸ್ಲಿಮರು. ಇಂಥವರ ಮೇಲಿನ ಪ್ರಕರಣ ವಾಪಸ್ ಪಡೆಯುತ್ತಾರೆ. ಇದು ಕಾನೂನು ಸುವ್ಯವಸ್ಥೆ ಕಾಪಾಡುವ ಸರ್ಕಾರ ಅಲ್ಲ ಇದು ಜನ ವಿರೋಧಿ ಸರ್ಕಾರ’ ಎಂದು ಆರೋಪಿಸಿದರು. ‘ನಾಗಮಂಗಲದಲ್ಲಿ ಕಳೆದ ವರ್ಷ ಗಲಾಟೆ ಮಾಡಿದ್ರು ಕೆರಗೋಡಿನಲ್ಲಿ ಧ್ವಜ ಹಾರಿಸಲು ಬಿಡಲಿಲ್ಲ. ಕಲ್ಲು ತೂರಿದವರ ಮೇಲೆ ಕೇಸ್ ಹಾಕುವ ಬದಲು ಸರ್ಕಾರ ನಾಟಕ ಆಡುತ್ತಿದೆ. ಕೊನೆಗೆ ಬಿಜೆಪಿ ಜೆಡಿಎಸ್ ನಾಯಕರನ್ನು ಕಿಡಿಗೇಡಿಗಳು ಅಂತಾರೆ. ಜನ ನೀಡಿರುವ ಅಧಿಕಾರವನ್ನು ಸದ್ಬಳಕೆ ಮಾಡದೆ ಜನರನ್ನು ಅಯ್ಯೋ ಅನಿಸುತ್ತಿದ್ಧಾರೆ. ನಿಮ್ಮ ತುಷ್ಟೀಕರಣ ರಾಜಕೀಯ ಹೆಚ್ಚು ದಿನ ನಡೆಯಲ್ಲ’ ಎಂದು ಗುಡುಗಿದರು.