ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ಪೇಟೆ | ಜನತಾದರ್ಶನ: 260 ಅರ್ಜಿಗಳು ಸ್ವೀಕೃತ

ಸಾರ್ವಜನಿಕರಿಂದ ಸಮಸ್ಯೆಗಳ ಮಹಾಪೂರ;  ರೈತರ ಸಮಸ್ಯೆಗಳಿಗೆ ಕಿವಿಯಾದ ಡಿಸಿ ಮತ್ತು ಶಾಸಕ;
Published 4 ನವೆಂಬರ್ 2023, 15:21 IST
Last Updated 4 ನವೆಂಬರ್ 2023, 15:21 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ‘ಜನತಾದರ್ಶನ ಭಾಷಣ ಮಾಡುವ ಕಾರ್ಯಕ್ರಮವಲ್ಲ; ಸಾರ್ವಜನಿಕರು ಮತ್ತು ರೈತರ ಸಮಸ್ಯೆಗಳಿಗೆ ನೇರವಾಗಿ ಪರಿಹಾರವನ್ನು ಕಂಡುಹಿಡಿಯುವುದಾಗಿದೆ’ ಎಂದು ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ಹೇಳಿದರು.

ಪಟ್ಟಣದ ಮಿನಿವಿದಾನಸೌಧದಲ್ಲಿ ಜಿಲ್ಲಾ ಆಡಳಿತ, ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ‘ಜನತಾದರ್ಶನ’ದ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

‘ಸಣ್ಣ-ಪುಟ್ಟ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರವನ್ನು ದೊರಕಿಸಿಕೊಡಲಾಗುವುದು. ಉಳಿದಂತೆ ಕಾನೂನಿನ ಪರಿಮಿತಿಯೊಳಗೆ ಸರಿಪಡಿಸಬಹುದಾದ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು’ ಎಂದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ‘ಜಿಲ್ಲಾಡಳಿತವೇ ನೇರವಾಗಿ ರೈತರ ಮನೆ ಬಾಗಿಲಿಗೆ ಬಂದು ಸಮಸ್ಯೆಗಳ ನಿವಾರಣೆಗೆ ಮುಂದಾಗಿದೆ. ಈ ಅವಕಾಶವನ್ನು ರೈತರು ಮತ್ತು ಸಾರ್ವಜನಿಕರು ಬಳಸಿಕೊಳ್ಳಬೇಕು’ ಎಂದು ಕರೆನೀಡಿದರು.

ಗಮನಸೆಳೆದ ಅರ್ಜಿಗಳು: ಹೇಮಾವತಿ ಬಡಾವಣೆಯ ನಿವೇಶನಗಳ ಅಕ್ರಮ -ಸಕ್ರಮ ಸಮಸ್ಯೆ ನಿವಾರಣೆಗೆ ನಾಗರಿಕರು ಮನವಿ ಸಲ್ಲಿಸಿದರು. ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ, ಪರಿಹಾರಕ್ಕೆ ಕಾಲಮಿತಿ ನಿಗದಿಪಡಿಸಲಾಗುವದು. ಸಮಗ್ರ ಮಾಹಿತಿ ಮತ್ತು ವಿವರಗಳನ್ನು ತಮಗೆ ಸಲ್ಲಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು.

ಕತ್ತರಘಟ್ಟ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಮೃತನಾದ ರೈತನಿಗೆ ಪರಿಹಾರ ನೀಡುವ ಸಂಬಂಧ ಸ್ಪಷ್ಟ ನಿರ್ದೇಶನವನ್ನು ಸೆಸ್ಕಾಂಗೆ ಜಿಲ್ಲಾಧಿಕಾರಿಯವರು ನೀಡಿದರು.  ನನೆಗುದಿಗೆ ಬಿದ್ದ ಗೂಡೆಹೊಸಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಸಂಪೂರ್ಣ, ಸರ್ಕಾರಿ ಪಾಲಿಟೆಕ್ನಿಕ್ ಹಿಂಭಾಗದ ರೈತರ ಜಮೀನುಗಳಿಗೆ ಹೋಗಲು ರಸ್ತೆಯನ್ನು ನಿರ್ಮಿಸಿಕೊಡಲು ಸೂಚಿಸಿದರು.

ಪಹಣಿ ದೋಷ ನಿವಾರಣೆ, ಪೌತಿ ಖಾತೆ ಕುರಿತು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸೌಲಭ್ಯಗಳ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಲಾಯಿತು.

260 ಅರ್ಜಿಗಳ ಪೈಕಿ ಕಂದಾಯ–186, ಆರ್‌ಡಿಪಿಆರ್‌–20, ಲೋಕೋಪಯೋಗಿ–5, ಸರ್ವೆ–35, ಪುರಸಭೆ–5, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ–3 ಸಲ್ಲಿಕೆಯಾಗಿದ್ದು, 12 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಯಿತು.

ಶಾಸಕ ಎಚ್.ಟಿ.ಮಂಜು ಜನತಾದರ್ಶನದ ಕೊನೆಯವರೆಗೂ ಕೂತು ರೈತರ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಕಿವಿಯಾದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸಿಫ್, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ನಿಸರ್ಗಪ್ರಿಯ, ತಾ.ಪಂ ಇಒ ಬಿ. ಎಸ್.ಸತೀಶ್, ಆಡಳಿತಾಧಿಕಾರಿ ರಾಜಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಜಗರೆಡ್ಡಿ , ಹಿರಿಯ ರೈತಮುಖಂಡ ಮುದುಗೆರೆ ರಾಜೇಗೌಡ, ಕರ್ನಾಟಕ ರಾಷ್ಟ್ರ ಸಮಿತಿಯ ಮುರುಗೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ. ಎಲ್.ದೇವರಾಜು ಭಾಗವಹಿಸಿದ್ದರು

ಭಾಗವಹಿಸಿರುವ ಸಾರ್ವಜನಿಕರು
ಭಾಗವಹಿಸಿರುವ ಸಾರ್ವಜನಿಕರು
ಸಾರ್ವಜನಿಕರು ಮತ್ತು ರೈತಮುಖಂಡರಿಂದ ಮನವಿ ಸ್ವೀಕರಿಸಿ ಅಹವಾಲು ಆಲಿಸುತ್ತಿರುವ ಜಿಲ್ಲಾಧಿಕಾರಿ
ಸಾರ್ವಜನಿಕರು ಮತ್ತು ರೈತಮುಖಂಡರಿಂದ ಮನವಿ ಸ್ವೀಕರಿಸಿ ಅಹವಾಲು ಆಲಿಸುತ್ತಿರುವ ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿ ಡಾ. ಕುಮಾರ್ಮಾತನಾಡಿದರು
ಜಿಲ್ಲಾಧಿಕಾರಿ ಡಾ. ಕುಮಾರ್ಮಾತನಾಡಿದರು
ವಿವಿಧ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸೌಲಭ್ಯಗಳ ಮಂಜೂರಾತಿ ಆದೇಶ ಪತ್ರ ವಿತರಿಸಿದ ಜಿಲ್ಲಾಧಿಕಾರಿ ಕುಮಾರ
ವಿವಿಧ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸೌಲಭ್ಯಗಳ ಮಂಜೂರಾತಿ ಆದೇಶ ಪತ್ರ ವಿತರಿಸಿದ ಜಿಲ್ಲಾಧಿಕಾರಿ ಕುಮಾರ

Highlights - ಜನತಾದರ್ಶನ; 12 ಅರ್ಜಿ ಸ್ಥಳದಲ್ಲೇ ಇತ್ಯರ್ಥ   ಕಂದಾಯ ಇಲಾಖೆಗೆ ಗರಿಷ್ಠ ಅರ್ಜಿಗಳ ಸಲ್ಲಿಕೆ ಕಾಲಮಿತಿಯಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT