ಮಳವಳ್ಳಿ: 2024ರ ಲೋಕಸಭಾ ಚುನಾವಣೆ ಮುಗಿದ ಮರುದಿನವೇ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷ ಮೂಲೆಗುಂಪು ಮಾಡಲಿದೆ ಎಂದು ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಭವಿಷ್ಯ ನುಡಿದರು.
ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿಯು ಬಿ.ಎಸ್.ಯಡಿಯೂರಪ್ಪ ಅವರನ್ನು ವಯಸ್ಸಿನ ಕಾರಣ ನೀಡಿ ಅವಮಾನಿಸಿ ಅಧಿಕಾರದಿಂದ ಕೆಳಗಿಸಿತು. ವೀರೇಂದ್ರ ಪಾಟೀಲ್ ಅವರು ಆರೋಗ್ಯ ನೆಪದಿಂದ ಅಧಿಕಾರದಿಂದ ಕೆಳಗಿಳಿದಾಗ ಟೀಕಿಸಿದ್ಧ ಬಿಜೆಪಿ ಇದೀಗ ಜಗದೀಶ್ ಶೆಟ್ಟರ್ ಹಾಗೂ ಲಕ್ಷಣ ಸವದಿ ಅವರನ್ನು ಮುಗಿಸಲು ಬಿ.ಎಸ್.ಯಡಿಯೂರಪ್ಪ ಅವರಿಗೆ ಸುಪಾರಿ ನೀಡಿದೆ. ಏಕೆ ಪ್ರಹ್ಲಾದ್ ಜೋಶಿ ಹಾಗೂ ಬಿ.ಎಲ್.ಸಂತೋಷ್ ಇರಲಿಲ್ಲವೇ, ಅದಕ್ಕೆ ಲಿಂಗಾಯತ ನಾಯಕರೇ ಬೇಕೆ? ಎಂದು ಪ್ರಶ್ನೆ ಮಾಡಿದರು.
ಹಿಂದೆ ಲಕ್ಷಣ ಸವದಿಗೆ ಚುನಾವಣೆಯ ಜವಾಬ್ದಾರಿ ನೀಡಿ ಕ್ಷೇತ್ರಗಳನ್ನು ಗೆಲ್ಲಿಸಿದರೆ ಅಥಣಿ ಟಿಕೆಟ್ ನೀಡಲಾಗುವುದು ಎಂದು ಹೇಳಿ ಬಿಜೆಪಿ ಪ್ರಮುಖರು ಮೋಸ ಮಾಡಿದ್ದರು. ತಿಪ್ಪಾರೆಡ್ಡಿ ಹಾಗೂ ಸುರೇಶ್ ಕುಮಾರ್ ಮುಂತಾದವಿಗಿಲ್ಲದ ನಿಯಮ ತಂದು ಜಗದೀಶ್ ಶೆಟ್ಟರ್ ಅವರನ್ನು ತುಳಿಯಲು ಮುಂದಾಗಿದ್ದರು ಎಂದು ವಿಶ್ಲೇಷಿಸಿದರು.
ಬಿ.ಎಸ್.ಯಡಿಯೂರಪ್ಪ ನಂತರ ಪ್ರಹ್ಲಾದ್ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಹೊರಟಿತ್ತು. ಆ ವೇಳೆ ನಾನು ಶಾಮನೂರು ಶಿವಶಂಕರಪ್ಪ ಹಾಗೂ ಸಮಾಜದ ಸ್ವಾಮೀಜಿಗಳು ವಿರೋಧಿಸಿದಾಗ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದೆ ಎಂದರು.
ಕಾಂಗ್ರೆಸ್ 78 ಸ್ಥಾನದಿಂದ 38 ಸ್ಥಾನಕ್ಕಿಳಿಯಲಿದೆ ಎಂಬ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಕಳೆದ ಚುನಾವಣೆಯಲ್ಲಿ 38 ಸ್ಥಾನ ಪಡೆದಿದ್ದ ಜೆಡಿಎಸ್ ಈ ಬಾರಿ 20 ಸ್ಥಾನ ಬರುವುದಿಲ್ಲ ಎಂದು ಈಗಾಗಲೇ ಎಲ್ಲ ಸಮೀಕ್ಷೆಗಳೇ ಹೇಳಿವೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಸ್ವಷ್ಟ ಬಹುಮತ ಬರಬಾರದೆಂದು ಜೆಡಿಎಸ್ ಪ್ರಮುಖರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಸ್ವಷ್ಟ ಬಹುಮತ ಬಾರದಿದ್ದರೇ ಅಧಿಕಾರ ಹಿಡಿಯಲು ನಮ್ಮನ್ನೇ ಅವಲಂಭಿಸಬೇಕು ಎನ್ನುವ ಭಾವನೆಯಲ್ಲಿ ಇದ್ದಾರೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ 125ರಿಂದ 130 ಸ್ಥಾನ ಗಳಿಸಿ ಅಧಿಕಾರಕ್ಕೆ ಬರಲಿದೆ. ಪಿ.ಎಂ.ನರೇಂದ್ರಸ್ವಾಮಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡದ ಎಚ್.ಡಿ.ಕುಮಾರಸ್ವಾಮಿ ಅವರು ಆಡಿರುವ ಮಾತುಗಳೇ ನನಗೆ ಆಶೀರ್ವಾದ. ತಾಲ್ಲೂಕಿನ ನೀರಾವರಿ ಯೋಜನೆಗಳಿಗೆ ಸಾವಿರಾರು ಕೋಟಿ ಅನುದಾನ ನೀಡಿರುವ ಎಂ.ಬಿ.ಪಾಟೀಲ ಅವರಿಂದ ನನಗೆ ಬಲ ಬಂದಿದೆ. ನನ್ನನ್ನು ಸೋಲಿಸಲು ನಕಲಿ ಆಡಿಯೊ ಸಿದ್ಧಪಡಿಸಿರುವ ಮಾಹಿತಿ ಬಂದಿದೆ. ಯಾವುದೇ ಅಪಪ್ರಚಾರಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಪಕ್ಷದ ಪ್ರಮುಖರಾದ ಆರ್.ಎನ್.ವಿಶ್ವಾಸ್, ದಯಾಶಂಕರ್, ವಿ.ಪಿ.ನಾಗೇಶ್, ಕುಂದೂರು ಪ್ರಕಾಶ್, ಮುಟ್ಟನಹಳ್ಳಿ ಅಂಬರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಜೆ.ದೇವರಾಜು, ಎಸ್.ಪಿ.ಸುಂದರ್ ರಾಜ್, ಮುಖಂಡರಾದ ವಕೀಲ ಚಂದ್ರಶೇಖರ್, ಅಮೃತ್ ಕಠೇಶ್, ಪರಶಿವಮೂರ್ತಿ, ಜಯಣ್ಣ, ಬಾಬಣ್ಣ, ಅಶ್ವಿನ್, ಸಂಗಮೇಶ್, ನಾಮ ಮಹದೇವ, ಪುಟ್ಟುಮಾಧು, ಪುಟ್ಟಣ್ಣ ಇದ್ದರು.
Highlights - ‘ಯಡಿಯೂರಪ್ಪ ಅವರನ್ನು ಬಿಜೆಪಿ ಮೂಲೆಗುಂಪು ಮಾಡುವುದು ಖಚಿತ’ ‘ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ ’
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.