ನಾಗಮಂಗಲ: ವಿಷ್ಣು, ರಾಧಾಕೃಷ್ಣ, ಶಿವ, ಆಂಜನೇಯ, ಲಕ್ಷ್ಮೀ, ರಣಹದ್ದು, ಜಟಾಧರ, ಪುನೀತ್ ರಾಜ್ ಕುಮಾರ್, ರೈತ, ಗಂಡಬೇರುಂಡ, ಶ್ರೀರಾಮ, ಗಣೇಶ ಸೇರಿದಂತೆ ವಿಧವಿಧದ ಬಣ್ಣದ ಗಾಳಿಪಟಗಳು ಭಕ್ತಿ ಹಾಗೂ ಪ್ರೀತಿ ಇಮ್ಮಡಿಗೊಳಿಸುವಂತಹ ಸ್ಪರ್ಧೆಗೆ ಸಾಕ್ಷಿಯಾಯಿತು.
ಹೌದು, ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದ ಬಿ.ಜಿ.ಎಸ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಜಾನಪದ ಪರಿಷತ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ 33 ನೇ ರಾಜ್ಯಮಟ್ಟದ ಗಾಳಿಪಟ ಉತ್ಸವದಲ್ಲಿ ಕಂಡು ಬಂದ ದೃಶ್ಯವಿದು.
ಸಾಮಾಜಿಕ ಕಳಕಳಿ ಸಾರುವ ಭೂರ್ಣಹತ್ಯೆ ಜಾಗೃತಿ, ನೇಗಿಲಯೋಗಿ, ರೈತ ಮತ್ತು ಯೋಧರು, ಜನಪದ ಮತ್ತು ಕನ್ನಡದ ಕುರಿತು ಗಾಳಿಪಟಗಳನ್ನು ಸ್ಪರ್ಧಿಗಳು ಸಿದ್ಧಪಡಿಸಿ ತಂದು ಗಮನ ಸೆಳೆದರೆ, ಮಂಡ್ಯ, ದೊಡ್ಡಬಳ್ಳಾಪುರ, ಮೈಸೂರು, ಬೆಂಗಳೂರು, ತುಮಕೂರು, ರಾಮನಗರ, ಹಾಸನ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ಪರ್ಧಿಗಳು ಮನಸೂರೆ ಗೊಳಿಸುವ ಪಟಗಳನ್ನು ತಯಾರಿಸಿ ನೋಡುಗರ ಗಮನ ಸೆಳೆದರು.
ರೈತ, ಗಂಡಬೇರುಂಡ, ಶ್ರೀರಾಮ, ಗಣೇಶ, ಹುಡುಗಿ, ಮೀನು, ಆದಿಶೇಷ, ಹೃದಯ, ಕನಕ ಪಟ, ಗುಂಡುಚಕ್ರ, ವಿಷ್ಣು, ರಾಧಾಕೃಷ್ಣ, ಶಿವ, ಓಂ, ಆಂಜನೇಯ, ಲಕ್ಷ್ಮೀ, ಪ್ರೇಮಿಗಳ ಜೋಡಿ, ರಣಹದ್ದು, ಜಟಾಧರ, ಪುನೀತ್ ರಾಜ್ ಕುಮಾರ್, ಸೇರಿದಂತೆ ವಿಭಿನ್ನವಾದ ಗಾಳಿಪಟಗಳು ಬಾನಾಡಿಗಳಾಗಿ ಕಂಡು ಬಂದವು.
ಸ್ಪರ್ಧೆ ಆಸಕ್ತಿ ಹೆಚ್ಚಿಸಿದ ಗಾಳಿಪಟ ಪ್ರದರ್ಶನ, ಮಾರಾಟ ಮಳಿಗೆ
ಬಿ.ಜಿ.ಎಸ್ ಕ್ರೀಡಾಂಗಣದಲ್ಲಿ ಕ್ರೀಡಾಗಂಣದಲ್ಲಿ ಕೃಷಿ ಇಲಾಖೆಯ ಯೋಜನೆಗಳಿರುವ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡುವ ಪ್ರದರ್ಶನ ಮಳಿಗೆ ಸ್ಥಾಪಿಸಲಾಗಿತ್ತು, ಕೃಷಿ ಸಚಿವ ಚಲುವರಾಯಸ್ವಾಮಿ ಮತ್ತು ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಜೊತೆಗೆ ಗಾಳಿಪಟ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು, ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಮಳಿಗೆ, ಕೃಷಿ ಉತ್ಪಾದಕ ಸಮಿತಿಗಳ ಆಹಾರ ಪದಾರ್ಥಗಳ ಮಾರಾಟ ಮಳಿಗೆಗಳನ್ನು ತೆರೆದಿದ್ದು ವಿಶೇಷ ಹಾಗೂ ನೋಡುಗರ ಆಸಕ್ತಿ ಹೆಚ್ಚಿಸಿತು.
ಗಾಳಿಪಟ ಸ್ಪರ್ಧೆಗೆ ಚಾಲನೆ
ಶ್ರೀ ಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು 33 ನೇ ರಾಜ್ಯ ಮಟ್ಟದ ಗಾಳಿ ಪಟ ಸ್ಪರ್ಧೆಯಲ್ಲಿ ಗಾಳಿ ಪಟ ಹಾರಿಸುವ ಮೂಲಕ ಚಾಲನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.