ಕಾಂಗ್ರೆಸ್ ಅಭ್ಯರ್ಥಿ, ನಾಗಮಂಗಲ ತಾಲ್ಲೂಕಿನ ಕನ್ನಾಘಟ್ಟದ ಉದ್ಯಮಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಹಾಗೂ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಲಿರುವ ಎಚ್.ಡಿ.ಕುಮಾರಸ್ವಾಮಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿ ಕಾಂಗ್ರೆಸ್ ಶಾಸಕರು ಸ್ಟಾರ್ ಚಂದ್ರು ಸುತ್ತಲೂ ಕೋಟೆಯಂತೆ ಸುತ್ತುವರಿದಿದ್ದು ಈಗಾಗಲೇ ಹಲವು ಸುತ್ತಿನ ಪ್ರಚಾರ ಪೂರ್ಣಗೊಳಿಸಿದ್ದಾರೆ. ಚಂದ್ರು ಮನೆಯನ್ನೂ ಖರೀದಿಸಿದ್ದು ಸ್ಥಳೀಯ ಎಂಬ ಹಣೆಪಟ್ಟಿಯೊಂದಿಗೆ ಮತದಾರರನ್ನು ಸೆಳೆಯುತ್ತಿದ್ದಾರೆ.
‘ಹಾಸನ ನನ್ನ ಜನ್ಮಭೂಮಿ, ರಾಮನಗರ ಕರ್ಮಭೂಮಿ. ಎರಡಕ್ಕೂ ಮಿಗಿಲಾದ ನೆಲ ಮಂಡ್ಯ’ ಎನ್ನುತ್ತಾ ಸಕ್ಕರೆ ಜಿಲ್ಲೆಯತ್ತ ಹೆಜ್ಜೆ ಇಡುತ್ತಿರುವ ಎಚ್.ಡಿ.ಕುಮಾರಸ್ವಾಮಿ ಗುರುವಾರ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ವಿವಿಧ ಪಕ್ಷಗಳ ಮುಖಂಡರನ್ನು ಜೆಡಿಎಸ್ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಟಿಕೆಟ್ ವಂಚಿತರಾದ ಸಂಸದೆ ಸುಮಲತಾರ ಬೆಂಬಲ ಕೋರಿದ್ದಾರೆ. ಕಳೆದ ಚುನಾವಣೆಯ ಕಹಿ ಘಟನೆಗಳನ್ನೆಲ್ಲಾ ಮರೆತು ಇಬ್ಬರೂ ಒಂದಾಗಲಿದ್ದಾರೆಯೇ ಎಂಬ ಪ್ರಶ್ನೆ ಕ್ಷೇತ್ರದಲ್ಲಿದೆ. ಸುಮಲತಾ ಬುಧವಾರ ಉತ್ತರಿಸಿದ್ದಾರೆ. ಅನಾರೋಗ್ಯ, ನಿಖಿಲ್ ಸೋಲಿನ ಅನುಕಂಪ, ಒಕ್ಕಲಿಗರ ಬೆಂಬಲವೂ ಎಚ್ಡಿಕೆ ಬೆನ್ನಿಗಿವೆ ಎಂದೇ ಹೇಳಲಾಗುತ್ತಿದೆ.