ಮೇಲುಕೋಟೆ:ಯದುಗಿರಿಯ ಆರಾಧ್ಯ ದೈವ ಚೆಲುವನಾರಾಯಣ ಸ್ವಾಮಿಯು ರಾಮಾನುಜರಿಗೆ ದಶಾವತಾರ ದರ್ಶನ ನೀಡಿದ ನಿಮಿತ್ತ ನಡೆಯುವ ದಶಾವತಾರ ಉತ್ಸವ ಗುರುವಾರ ರಾತ್ರಿ ನೆರವೇರಿತು.
ರಾತ್ರಿ 11 ಗಂಟೆಗೆ ಆರಂಭವಾದ ಉತ್ಸವ ರಾತ್ರಿ 1 ಗಂಟೆಗೆ ಮುಕ್ತಾಯವಾಯಿತು. ರಾಮಾನುಜರ ತಿರುನಕ್ಷತ್ರ ಮಹೋತ್ಸವದ ಮುಂದಿನ ಕಾರ್ಯಕ್ರಮಗಳು ಬೆಳಿಗ್ಗೆ 5 ಗಂಟೆಯವರೆಗೆ ನಡೆದು ಸಂಪನ್ನವಾದವು.
1002ನೇ ತಿರುನಕ್ಷತ್ರ ಮಹೋತ್ಸವದ ಅಂಗವಾಗಿ ನೆರವೇರಿದ ದಶಾವತಾರದಲ್ಲಿ ಮತ್ಸ್ಯ, ಕೂರ್ಮ, ವರಾಹ, ವಾಮನ ನಾರಸಿಂಹ, ಬಲರಾಮ, ರಾಮ, ಕೃಷ್ಣ ಹಾಗೂ ಪುಷ್ಪಾಲಂಕಾರದಲ್ಲಿ ಕಂಗೊಳಿಸಿದ ಸ್ವಾಮಿಯ ಚೆಲುವನ್ನು ಆಸ್ವಾದಿಸಿ ಭಕ್ತರು ಪುನೀತಭಾವ ಪಡೆದರು.
ಆದಿಶೇಷನ ಅವತಾರಿಗಳಾದ ರಾಮಾನುಜರಿಗೆ ಮಹಾವಿಷ್ಣು ದಿವ್ಯದರ್ಶನ ನೀಡಿದ ಪ್ರತೀಕವಾಗಿ ನಡೆಯುವ ಈ ಉತ್ಸವದಲ್ಲಿ ಆಚಾರ್ಯರ ಬೆಳ್ಳಿ ಪಲ್ಲಕ್ಕಿ ಎದುರು ದಶಾವತಾರದ ಅಲಂಕಾರಗಳು ನೆರವೇರಿದವು. ತಿರುನಕ್ಷತ್ರ ಮಹಾಭಿಷೇಕದ ನಂತರ ರಾಮಾನುಜರಿಗೆ ಚೆಂದನದ ಅಲಂಕಾರ ನೆರವೇರಿಸಿ ರಾತ್ರಿ 7ಕ್ಕೆ ಸೀತಾರಣ್ಯಕ್ಕೆ ಉತ್ಸವ ನೆರವೇರಿಸಲಾಯಿತು. ಅಲ್ಲಿ 2ನೇ ಸ್ಥಾನಿಕರ ಭಿಕ್ಷಾ ಕೈಂಕರ್ಯ ನಡೆಯಿತು. ನಂತರ ದೇಶಿಕರ ಸನ್ನಿಧಿಯಲ್ಲಿ ಯತಿರಾಜ ಸಪ್ತತಿ ಹಾಗೂ ಮಣವಾಳ ಮಾಮುನಿ ಜೀಯರ್ ಸನ್ನಿಧಿಯಲ್ಲಿ ಯತಿರಾಜ ವಿಶಂತಿ ಪಾರಾಯಣ ಮಾಡಲಾಯಿತು.