ಮಂಡ್ಯ: ಮೈಸೂರು ಸಂಸದ ಪ್ರತಾಪಸಿಂಹ ಅವರು ನಗರದ ಕೆಎಚ್ಬಿ ಬಡಾವಣೆಯಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಿವಾಸಿಗಳಿಂದ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ರಸ್ತೆ ದುರಸ್ತಿ ಸೇರಿದಂತೆ ಸೇತುವೆ ಕಾಮಗಾರಿಯ ಬಗ್ಗೆಯೂ ಮನವಿ ನೀಡಿ ಗಮನಕ್ಕೆ ತರಲಾಯಿತು.ನಗರದ ಚಿಕ್ಕಮಂಡ್ಯ ಕೆ.ಎಚ್.ಬಿ. ಬಡಾವಣೆಯಲ್ಲಿನ ದ್ವಿ ಪಥ ರಸ್ತೆಯನ್ನು ದುರಸ್ತಿ ಮಾಡಿಸುವುದಾಗಿ ಪ್ರತಾಪಸಿಂಹ ಅವರು ಭರವಸೆ ನೀಡಿದರು.
ಮೈಸೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕಾರಣ ಭರ್ತಿ ತುಂಬಿದ ಲಾರಿಗಳು ಸಾಮಗ್ರಿಯನ್ನು ಇದೇ ರಸ್ತೆಯಲ್ಲಿ ಸಾಗಿಸುತ್ತಿದ್ದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದರು. ಶೀಘ್ರದಲ್ಲೇ ರಸ್ತೆ ದುರಸ್ತಿಗೆ ಕ್ರಮ ವಹಿಸುವ ಭರವಸೆ ನೀಡಿದರು.
ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಪ್ರತಾಪ ಸಿಂಹ ಅವರು, ರಸ್ತೆ ದುರಸ್ತಿ ಹಾಗೂ ನಾಲಾ ಏರಿಯನ್ನು ಎತ್ತರಿಸುವಂತೆ ಸೂಚಿಸಿದರು. ಬಡಾವಣೆಯ ಮಧ್ಯೆ ಹಾದು ಹೋಗುವ ದೊಡ್ಡ ಹಳ್ಳವನ್ನು ಸ್ವಚ್ಛ ಗೊಳಿಸಲು ಸೂಚನೆ ನೀಡಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಕೆ.ಎಚ್.ಬಿ.ಹಿತರಕ್ಷಣಾ ಸಮಿತಿ ಅಧ್ಯಕ್ಷ ಗೋವಿಂದರಾಜು, ಕಾರ್ಯದರ್ಶಿ ಕೆ.ಅಶೋಕ್, ಸಮಿತಿ ಸದಸ್ಯರಾದ ಹರೀಶ್ ಬಾಣಸವಾಡಿ, ರಾಜು, ಶ್ರೀಕಾಂತ್, ಜವರೇಗೌಡ ಇದ್ದರು.