ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಷುಗರ್‌: ಮುಂದುವರಿದ ಗೊಂದಲ, ಮಾತಿನ ಚಕಮಕಿ

ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್‌ ಎದುರಲ್ಲಿ ರೈತರ ಮುಖಂಡರ ಭಿನ್ನಾಭಿಪ್ರಾಯ, ಸಭೆ ರದ್ದು
Last Updated 10 ಜೂನ್ 2020, 13:01 IST
ಅಕ್ಷರ ಗಾತ್ರ

ಮಂಡ್ಯ: ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್‌ ಬುಧವಾರ ಮೈಷುಗರ್‌ ಕಾರ್ಖಾನೆಗೆ ಭೇಟಿ ನೀಡಿದ್ದ ವೇಳೆ ರೈತ ಮುಖಂಡರ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಕಾರ್ಖಾನೆ ಆವರಣದಲ್ಲಿ ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸಚಿವರು ರೈತ ಮುಖಂಡರ ಸಭೆ ರದ್ದುಗೊಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಸಂಸದೆ ಎ.ಸುಮಲತಾ ಅವರೊಂದಿಗೆ ಸಚಿವ ಶಿವರಾಮ್‌ ಹೆಬ್ಬಾರ್‌ ಮೈಷುಗರ್‌ ಅತಿಥಿಗೃಹಕ್ಕೆ ಬಂದರು. ಈ ಸಂದರ್ಭಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು, ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್‌ ಕಾರ್ಖಾನೆ ಉಳಿಯಬೇಕು ಎಂದು ಒತ್ತಾಯಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಬ್ಬು ಒಪ್ಪಿಗೆದಾರರ ಸಂಘದ ಸದಸ್ಯರು ‘ಕಾರ್ಯಾಚರಣೆ ಹಾಗೂ ನಿರ್ವಹಣೆ’ (ಒ ಅಂಡ್‌ ಎಂ) ಮಾದರಿಯಲ್ಲಿ ಕಾರ್ಖಾನೆಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ‘ಸರ್ಕಾರದ ಕಾರ್ಖಾನೆಯನ್ನು ಸರ್ಕಾರವೇ ನಡೆಸಬೇಕು, ಜುಲೈ ಮೊದಲ ವಾರದಲ್ಲಿ ಕಬ್ಬು ಅರೆಯಬೇಕು, ಕಳೆದ ಬಾರಿ ಬೇರೆ ಕಾರ್ಖಾನೆಗಳಿಗೆ ಸಾಗಿಸಿದ ಕಬ್ಬಿನ ಸಾಗಣೆ ವೆಚ್ಚ ನೀಡಬೇಕು’ ಎಂದು ರೈತ ಹಿತರಕ್ಷಣಾ ಸಮಿತಿ ಸದಸ್ಯರು ಘೋಷಣೆ ಕೂಗಿದರು.

‘ಮೊದಲು ಕಾರ್ಖಾನೆ ಆರಂಭವಾಗಬೇಕು. ಹೊರ ಜಿಲ್ಲೆಗಳಿಗೆ ಕಬ್ಬು ಸಾಗಿಸಲಾಗದೇ, ಸಾಗಣೆ ವೆಚ್ಚ ಭರಿಸಲಾಗದೇ ಹೈರಾಣಾಗಿದ್ದೇವೆ. ಕಾರ್ಯಾಚರಣೆ ಹಾಗೂ ನಿರ್ವಹಣೆ ಮಾದರಿಯಲ್ಲೇ ಕಾರ್ಖಾನೆ ಆರಂಭಿಸಬೇಕು’ ಎಂದು ಕಬ್ಬು ಒಪ್ಪಿಗೆದಾರರ ಸಂಘದ ಸದಸ್ಯರು ಒತ್ತಾಯಿಸಿದರು. ಸ್ಥಳದಲ್ಲಿ ಗೊಂದಲ ಉಂಟಾಗುತ್ತಿದ್ದಂತೆ ಶಿವರಾಮ್‌ ಹೆಬ್ಬಾರ್‌ ರೈತ ಮುಖಂಡರ ಸಭೆ ರದ್ದು ಮಾಡಿ ತೆರಳಿದರು.

ಪಾಳು ಬೀಳುವುದು ಬೇಡ: ನಂತರ ಸುದ್ದಿಗಾರರ ಜೊತೆ ಮಾತನಾಡಿದ ಶಿವರಾಮ ಹೆಬ್ಬಾರ್‌ ‘ನಮ್ಮ ಮುಂದೆ ಮೂರು ಆಯ್ಕೆಗಳಿದ್ದು, ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಕಾರ್ಖಾನೆ ಪಾಳು ಬೀಳುತ್ತದೆ. ಎಲ್ಲರೂ ಸೇರಿ ಕಾರ್ಖಾನೆ ಪುನಶ್ಚೇತನ ಮಾಡಲು ಸಹಕಾರ ನೀಡಬೇಕು. ರೈತರ ಸಂಕಷ್ಟಕ್ಕೆ ಮುಕ್ತಿ ನೀಡಬೇಕು’ ಎಂದರು.

‘ಖಾಸಗೀಕರಣ ಮಾಡಬಾರದು ಎಂದು ರೈತ ಮುಖಂಡರು ಒತ್ತಾಯ ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೂ ಇದೇ ಮಣ್ಣಿನ ಮಗನಾಗಿದ್ದು, ಜನರ ಭಾವನೆಗೆ ಬೆಲೆ ನೀಡಿ ಕಾರ್ಖಾನೆ ಟೆಂಡರ್ ಮುಂದೂಡಿದ್ದಾರೆ. ಕಾರ್ಖಾನೆ ಇದೇ ಸ್ಥಿತಿಯಲ್ಲಿ ಇರುವುದು ಯಾರಿಗೂ ಇಷ್ಟವಿಲ್ಲ. ಈ ವರ್ಷವೇ ಕಬ್ಬು ಅರೆಯಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಕಾರ್ಖಾನೆಯ ಸಿಬ್ಬಂದಿಗೆ ಸ್ವಯಂ ನಿವೃತ್ತಿ ನೀಡಲು ₹ 22 ಕೋಟಿ ಬಿಡುಗಡೆಯಾಗಿದ್ದು ಎಲ್ಲರಿಗೂ ಹಣ ಸಂದಾಯ ಮಾಡಿ ನಂತರ ಒಂದು ನಿರ್ಧಾರಕ್ಕೆ ಬರಲಾಗುವುದು’ ಎಂದರು.

ನಂತರ ಸಚಿವರು ಅಧಿಕಾರಿಗಳೊಂದಿಗೆ ಮೈಷುಗರ್‌ ಕಾರ್ಖಾನೆ ಪರಿಶೀಲಿಸಿದರು. ಶಾಸಕ ಎಂ.ಶ್ರೀನಿವಾಸ್‌, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಇದ್ದರು.

ಮಾಲ್‌, ಕಾಂಪ್ಲೆಕ್ಸ್‌ ಮಾಡುತ್ತಿಲ್ಲ: ಸುಮಲತಾ

ಸಂಸದೆ ಎ.ಸುಮಲತಾ ಮಾತನಾಡಿ ‘ಹಲವಾರು ವರ್ಷಗಳಿಂದ ಸರ್ಕಾರಗಳು ಬದಲಾದರೂ ಮೈಷುಗರ್ ಸಮಸ್ಯೆ ಬಗೆಹರಿದಿಲ್ಲ. ಖಾಸಗೀಕರಣವಾದರೂ ಮಾಡಿ, ಒ ಅಂಡ್‌ ಎಂ ಬೇಕಾದರೂ ಮಾಡಿ ಆದಷ್ಟು ಬೇಗ ಕಾರ್ಖಾನೆ ಆರಂಭಿಸಬೇಕು. ಕಾರ್ಖಾನೆಯನ್ನು ಮಾಲ್‌, ಕಾಂಪ್ಲೆಕ್ಸ್‌ ಮಾಡುತ್ತಿಲ್ಲ. ಸರ್ಕಾರದ ನಿರ್ಧಾರಕ್ಕೆ ರೈತರು ವಿರೋಧ ಮಾಡುವುದು ಸರಿಯಲ್ಲ’ ಎಂದರು.

‘ಕಾರ್ಖಾನೆಯನ್ನು ಪ್ರಾರಂಭಿಸಲೇಬೇಕು ಎಂದು ಮುಖ್ಯಮಂತ್ರಿ ದೃಢ ನಿರ್ಧಾರ ಕೈಗೊಂಡಿದ್ದಾರೆ. ಸಕ್ಕರೆ ಸಚಿವರು ಕೂಡ ಬಹಳ ಆಸಕ್ತಿ ತೋರಿಸಿದ್ದಾರೆ. ರೈತರಿಗೆ ಅನುಕೂಲವಾಗುವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

₹ 50 ಕೋಟಿ ಸಾಲಕ್ಕೆ ಸಿ.ಎಂ ಸೂಚನೆ: ಕೆಸಿಎನ್‌

ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಕಾರ್ಖಾನೆ ಆರಂಭಿಸಲು ಸರ್ಕಾರ ₹ 25 ಕೋಟಿ ನೀಡಲಿದೆ. ₹ 50 ಕೋಟಿ ಹಣವನ್ನು ಸಾಲ ಪಡೆದು ಕಾರ್ಖಾನೆ ಕಾರ್ಖಾನೆ ಆರಂಭಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಶೀಘ್ರ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

‘ಕಾರ್ಖಾನೆಯನ್ನು ಗುತ್ತಿಗೆ ನೀಡಲು ತೀರ್ಮಾನಿಸಲಾಗಿತ್ತು. ಮೈಷುಗರ್ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಇದ್ದು ಗುತ್ತಿಗೆಗೆ ನೀಡುವುದು ಬೇಡ ಎಂಬ ಮನವಿ ಬಂದ ಕಾರಣ ಖಾಸಗೀಕರಣ ನಿರ್ಧಾರ ಕೈಬಿಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT