ಕೆ.ಆರ್.ಪೇಟೆ (ಮಂಡ್ಯ ಜಿಲ್ಲೆ): ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ಮಂಗಳವಾರ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತಸಂಘ ಮಹಿಳಾ ರಾಜ್ಯಘಟಕದ ಅಧ್ಯಕ್ಷೆ ನಂದಿನಿ ಜಯರಾಂ ಟ್ರಾಕ್ಟರ್ ಓಡಿಸುವ ಮೂಲಕ ಗಮನ ಸೆಳೆದರು.
ಪಟ್ಟಣದ ಪ್ರವಾಸಿಮಂದಿರ ವೃತ್ತದಿಂದ ಪರೇಡ್ ಆರಂಭವಾಯಿತು. ತಲೆಗೆ ಹಸಿರು ಟವೆಲ್ ಕಟ್ಟಿದ್ದ ನಂದಿನಿ ಜಯರಾಂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಹಿರಂಗ ಸಭೆ ನಡೆದ ರಂಗ ಚಿತ್ರಮಂದಿರದವರೆಗೂ ಟ್ರಾಕ್ಟರ್ ಓಡಿಸಿಕೊಂಡು ಬಂದರು.
‘ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ರೈತರಿಗೆ ಮಾತ್ರ ಸಂಬಂಧಿಸಿಲ್ಲ. ದೇಶದಲ್ಲಿ ಅನ್ನ ತಿನ್ನುವ ಪ್ರತಿಯೊಬ್ಬ ಪ್ರಜೆಗೂ ಸಂಬಂಧಿಸಿದೆ. ಸರ್ಕಾರ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂ ರೈತರ ಪ್ರತಿಭಟನೆ ಮುಂದುವರಿಯಲಿದೆ’ ಎಂದರು.