ನಾಗಮಂಗಲ: ಪರಿಸರ ಸಂರಕ್ಷಣೆ ಎಂಬುದು ಕೇವಲ ಆಚರಣೆಗೆ ಸೀಮಿತವಾಗದೆ ಅದು ನಿರಂತರ ಮುಂದುರಿಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ದೀಪಕ್ ಪಾಟೀಲ ಹೇಳಿದರು.
ತಾಲ್ಲೂಕಿನ ಹೊನ್ನಬೆಟ್ಟದಲ್ಲಿ ಭಾನುವಾರ ಗಿಡಗಳಿಗೆ ನೀರೆರೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಳೆಗಾಲದಲ್ಲಿ ನೆಟ್ಟ ಗಿಡಗಳು ಬಿಸಿಲಿಗೆ ಒಣಗುವುದರಿಂದ ಬೇಸಿಗೆಯಲ್ಲಿ ನೀರು ಹಾಕಿದರೆ ಮಾತ್ರ ಅವುಗಳು ಉಳಿಯಲು ಸಾಧ್ಯವಾಗುತ್ತದೆ ಎಂದರು.
ಆಗಸ್ಟ್ ತಿಂಗಳಿನಲ್ಲಿ ಮಾತೃ ಫೌಂಡೇಶನ್ ವತಿಯಿಂದ ಸರ್ಕಾರಿ ಪದವಿಪೂರ್ವ ಕಾಲೇಜು ಎನ್.ಎಸ್.ಎಸ್, ಅರಣ್ಯ ಇಲಾಖೆ ಮತ್ತು ಬೆಂಗಳೂರು ವಕೀಲರ ಸಂಘದ ಸಹಯೋಗದಲ್ಲಿ ಹೈಕೋರ್ಟ್ ನ್ಯಾಯಾಧೀಶರ ಉಪಸ್ಥಿತಿಯಲ್ಲಿ ಕಾನೂನು ವನ ಪರಿಕಲ್ಪನೆಯಲ್ಲಿ ಎರಡು ಸಾವಿರ ಗಿಡಗಳನ್ನು ನೆಡಲಾಗಿತ್ತು.
ಮಾತೃ ಫೌಂಡೇಶನ್ ಅಧ್ಯಕ್ಷ ವಕೀಲ ಚಂದ್ರಕುಮಾರ್ ಮಾತನಾಡಿ, ಹೊನ್ನ ಬೆಟ್ಟದಲ್ಲಿ ನಿರ್ದಿಷ್ಟ ದಿನಗಳಿಗೆ ನೀರನ್ನು ಹಾಕುವ ಕೆಲಸವನ್ನು ಮುಂದುವರಿಸಿ ಗಿಡಗಳನ್ನು ಉಳಿಸುತ್ತೇವೆ ಎಂದರು. ವಲಯ ಅರಣ್ಯಾಧಿಕಾರಿ ಮಂಜುನಾಥ್ ಮಾತನಾಡಿದರು. ವಿದ್ಯಾರ್ಥಿಗಳು, ನ್ಯಾಯಾಧೀಶರು, ವಕೀಲರು, ಉಪನ್ಯಾಸಕರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗ ಗಿಡಗಳಿಗೆ ಬಿಂದಿಗೆಯಲ್ಲಿ ನೀರನ್ನು ಹಾಕಿದರು.
ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಯೋಗೇಶ್, ಸಿವಿಲ್ ನ್ಯಾಯಾಧೀಶ ಕೆ.ಪಿ.ಸಿದ್ಧಪ್ಪಾಜಿ, ಉಪವಲಯ ಅರಣ್ಯಾಧಿಕಾರಿ ಮಂಜು, ಧರ್ಮದರ್ಶಿ ಮಾಯಣ್ಣಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೊಣನೂರು ಧನಂಜಯ್, ಉಪನ್ಯಾಸಕ ಚಂದ್ರಶೇಖರ್, ಸಚಿನ್ ಮತ್ತು ವಿದ್ಯಾರ್ಥಿಗಳು ಇದ್ದರು.