ಮಂಡ್ಯ: ವಾರದಿಂದ ಸುರಿದ ನಿರಂತರ ಮಳೆಯಿಂದಾಗಿ ನಗರ, ಪಟ್ಟಣ, ಗ್ರಾಮೀಣ ಪ್ರದೇಶದ ರಸ್ತೆಗಳು ತೀವ್ರವಾಗಿ ಕಿತ್ತು ಹೋಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಗುಂಡಿಗಳಿಗೆ ತೇಪೆ ಹಾಕಿ ಕೈತೊಳೆದುಕೊಂಡಿದ್ದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಬಣ್ಣ ಬಯಲಾಗಿದೆ. ಗುಂಡಿಬಿದ್ದ ರಸ್ತೆಗಳಲ್ಲಿ ಜೀವ ಕೈಲಿಡಿದು ವಾಹನ ಚಾಲನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರ ವ್ಯಾಪ್ತಿಯ ರಸ್ತೆಗಳನ್ನು ನಗರಸಭೆ, ಲೋಕೋಪಯೋಗಿ ಇಲಾಖೆ ವತಿಯಿಂದ ಇತ್ತೀಚೆಗಷ್ಟೇ ತೇಪೆ ಹಾಕಲಾಗಿತ್ತು. ವಾರದಿಂದ ಸುರಿದ ನಿರಂತರ ಮಳೆಯಿಂದಾಗಿ ತೇಪೆ ಕಿತ್ತು ಹೋಗಿದ್ದು ಮತ್ತೆ ಗುಂಡಿಗಳು ಮೇಲೆದ್ದು ಬಂದಿವೆ. ಗುಣಮಟ್ಟದ ಕಾಮಗಾರಿ ಮಾಡದೆ ಕಾಟಾಚಾರಕ್ಕೆ ರಸ್ತೆ ದುರಸ್ತಿ ಮಾಡಿದ್ದ ಪರಿಣಾಮ ರಸ್ತೆಗಳು ಕಿತ್ತು ಹೋಗಿವೆ ಎಂದು ಆರೋಪಿಸುತ್ತಿದ್ದು ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ನಗರದ ವಿವಿ ರಸ್ತೆ ಮತ್ತೆ ಹಾಳಾಗಿದೆ. 2 ತಿಂಗಳ ಹಿಂದಷ್ಟೇ ಮಹಾವೀರ ವೃತ್ತದಲ್ಲಿ ದೊಡ್ಡ ಕಂದಕವೇ ನಿರ್ಮಾಣವಾಗಿತ್ತು. ಕಲಾ ಮಂದಿರ, ಅಶೋಕ್ನಗರ ಭಾಗದಿಂದ ಅಪಾರ ಪ್ರಮಾಣದ ನೀರು ಹರಿದು ಬಂದು ಕರೆಯಂತಹ ವಾತಾವರಣ ನಿರ್ಮಾಣವಾಗಿತ್ತು. ತಿಂಗಳ ಹಿಂದಷ್ಟೇ ಅಲ್ಲಿಯ ಕಂದಕ ಮುಚ್ಚಿ ಡಾಂಬರ್ ಹಾಕಲಾಗಿತ್ತು. ಆದರೆ ಸದ್ಯ ಸುರಿಯುತ್ತಿರುವ ಮಳೆಯಿಂದಾಗಿ ಮಹಾವೀರ ವೃತ್ತದ ಡಾಂಬರ್ ಕಿತ್ತು ಹೋಗಿದೆ.
ರೈಲ್ವೆ ಗೇಟ್ ಕಡೆ ಹೋಗುವ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿದ್ದು 2 ಅಡಿ ಆಳದ ಕಂದಕ ನಿರ್ಮಾಣವಾಗಿದೆ. ಮಳೆ ನೀರು ನಿಂತಾಗ ವಾಹನ ಚಾಲಕರು ನೇರವಾಗಿ ಗಾಡಿ ಇಳಿಸಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಗಾಂಧಿ ಉದ್ಯಾನದ ಕಡೆಯಿಂದಲೂ ನೀರು ಹರಿದು ಬರುವ ಕಾರಣ ಮಹಾವೀರ ವೃತ್ತ ಕೆರೆಯಾಗಿ ಮಾರ್ಪಾಡಾಗುತ್ತಿದೆ.
ಹೊಳಲು ವೃತ್ತಕ್ಕೆ 2 ತಿಂಗಳ ಹಿಂದಷ್ಟೇ ಡಾಂಬರ್ ಹಾಕಲಾಗಿತ್ತು. 2 ತಿಂಗಳು ಜಲ್ಲಿ ಹಾಕಿ ಹಾಗೆಯೇ ಬಿಟ್ಟಿದ್ದ ಕಾರಣ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸಿದ್ದರು. ಕಡೆಗೆ ಡಾಂಬರ್ ಹಾಕಿದಾಗ ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಮಳೆಯ ಪರಿಣಾಮ ವಿವಿಧೆಡೆ ಡಾಂಬರ್ ಕಿತ್ತು ಹೋಗಿದ್ದು ಕಂದಕಗಳು ನಿರ್ಮಾಣವಾಗಿದೆ. ಬಸ್ ನಿಲ್ದಾಣ ಬಳಿಯ ಮೇಲ್ಸೇತುವೆ ಕೆಳಗೆ ವಾಹನ 2–3 ಅಡಿ ಗುಂಡಿ ನಿರ್ಮಾಣವಾಗಿದ್ದು ಜನರು ಸಾಕ್ಷಾತ್ ನರಕವನ್ನೇ ಕಾಣುತ್ತಿದ್ದಾರೆ.
‘ಮಂಡ್ಯ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು ಕೆಳಸೇತುವೆಯಲ್ಲಿ 10 ನಿಮಿಷ ನಿಂತು ವೀಕ್ಷಣೆ ಮಾಡಬೇಕು. ದ್ವಿಚಕ್ರ ಚಾಲಕರಿಗೆ ಚರಂಡಿ ನೀರು ಮೈಮೇಲು ಹಾರುತ್ತಿದೆ, ಜನರ ಗೋಳು ಕೇಳುವವರೇ ಇಲ್ಲವಾಗಿದ್ದಾರೆ’ ಎಂದು ಪೇಟೆಬೀದಿಯ ವ್ಯಾಪಾರ ಕೀರ್ತನ್ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ನಗರ ವ್ಯಾಪ್ತಿಯ ವಿವಿಧೆಡೆ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಕೂಡ ಹಾಳಾಗಿದೆ. ಸಾರಿಗೆ ಸಂಸ್ಥೆ ಬಸ್ ನಿಲ್ದಾಣ, ನಂದಾ ಟಾಕೀಸ್, ಫ್ಯಾಕ್ಟರಿ ವೃತ್ತದಲ್ಲಿ ರಸ್ತೆಯಲ್ಲಿ ಗುಂಡಿಗಳಿವೆ. ರಾಜ್ಯ ಹೆದ್ದಾರಿಗಳು ಕೂಡ ಮಳೆಯ ನಂತರ ತೀವ್ರವಾಗಿ ಹಾಳಾಗಿವೆ. ಶ್ರೀರಂಗಪಟ್ಟಣದಿಂದ ಕೆ.ಆರ್.ಪೇಟೆವರೆಗೆ ವಾಹನ ಓಡಿಸುವುದು ಸಾಹಸವಾಗಿದೆ.
ಶ್ರೀರಂಗಪಟ್ಟಣದಿಂದ ಕೆಆರ್ಎಸ್ವರೆಗೆ ರಸ್ತೆ ಅತೀ ಹೆಚ್ಚು ಹಾಳಾಗಿದೆ. ಮಂಡ್ಯದಿಂದ ಮಳವಳ್ಳಿ, ಭಾರತೀನಗರಕ್ಕೆ ತೆರಳುವ ರಸ್ತೆಗಳು ಕೂಡ ಮಳೆ ಅವಾಂತರದಿಂದ ಹಾಳಾಗಿವೆ.
*******
ಹಳಿ ಮೇಲೆ ಬೀಳುತ್ತಿರುವ ಬೈಕ್
ಮಹಾವೀರ ವೃತ್ತದ ರೈಲ್ವೆ ಹಳಿಯ ಮೇಲಿನ ಕಲ್ಲುಗಳು (ಸ್ಲ್ಯಾಬ್) ಕಿತ್ತು ಹೋಗಿದ್ದು ದ್ವಿಚಕ್ರವಾಹನ ಚಾಲಕರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ತಿಂಗಳ ಹಿಂದೆ ಸುರಿದ ಮಳೆಯ ವೇಳೆಯಲ್ಲೇ ಈ ಕಲ್ಲುಗಳು ಕಿತ್ತು ಹೋಗಿದ್ದರೂ ರೈಲ್ವೆ ಅಧಿಕಾರಿಗಳು ಹಳಿಯನ್ನು ದುರಸ್ತಿ ಮಾಡಿಲ್ಲ.
ಚಕ್ರಗಳು ಸಿಕ್ಕಿಹಾಕಿಕೊಳ್ಳುತ್ತಿದ್ದು ಮುಂದೆ ಹೋಗಲು ಸಾಧ್ಯವಾಗದೇ ಬೈಕ್ಗಳು ಬೀಳುತ್ತಿವೆ. ಪ್ರತಿನಿತ್ಯ 10ಕ್ಕೂ ಹೆಚ್ಚು ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಸೈಕಲ್ ಮೇಲಿಂದ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಹಳಿಗಳನ್ನು ಗಟ್ಟಿಗೊಳಿಸುವ ಕಲ್ಲುಗಳು ಎದ್ದು ಬಂದಿದ್ದರೂ ಅವುಗಳನ್ನು ದುರಸ್ತಿ ಮಾಡಿಲ್ಲ, ಅಲ್ಲಿರುವ ಗೇಟ್ಮ್ಯಾನ್ ಮೂಕ ಪ್ರೇಕ್ಷಕರಾಗಿದ್ದಾರೆ.
‘ಈಗಾಗಲೇ ರೈಲು ನಿಲ್ದಾಣದ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಆದರೆ ಅದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಸಿಬ್ಬಂದಿ ವರ್ತಿಸುತ್ತಿದ್ದಾರೆ’ ಎಂದು ಪೇಟೆಬೀದಿ ನಿವಾಸಿ ಮೊಹಮ್ಮದ್ ರಿಯಾಜ್ ಆರೋಪಿಸಿದರು.
*****
ಹಾಳಾಗಿರುವ ರಸ್ತೆಗಳನ್ನು ತಕ್ಷಣವೇ ದುರಸ್ತಿ ಮಾಡಿಸುವಂತೆ ಪಿಡಬ್ಲ್ಯೂಡಿ, ಆರ್ಪಿಇಡಿ ಅಧಿಕಾರಿಗಳಿಗೆ ಸೂಚನೆ ನಿಡಿದ್ದೇನೆ. ಕಳಪೆ ಕಾಮಗಾರಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು
–ಎಸ್.ಅಶ್ವತಿ, ಜಿಲ್ಲಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.