ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರ ಬಡವರಿಗೆ ಸಮರ್ಪಿತ: ಸಚಿವ ಕೃಷ್ಣಪಾಲ್‌ ಗುರ್ಜರ್‌

ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಕೇಂದ್ರ ಸಚಿವ ಕೃಷ್ಣಪಾಲ್‌ ಗುರ್ಜರ್‌ ಸಲಹೆ
Last Updated 8 ಜುಲೈ 2022, 13:32 IST
ಅಕ್ಷರ ಗಾತ್ರ

ಮಂಡ್ಯ: ‘ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಡವರಿಗೆ ಸಮರ್ಪಿತವಾಗಿದ್ದು ಕಳೆದ 8 ವರ್ಷಗಳಿಂದ ಜನೋಪಯೋಗಿ ಯೋಜನೆ ಜಾರಿಗೊಳಿಸಲಾಗಿದೆ. ಫಲಾನುಭವಿಗಳು ಪ್ರಧಾನಮಂತ್ರಿಗೆ ಪತ್ರ ಬರೆದು ಅಭಿನಂದಿಸಬೇಕು’ ಎಂದು ಕೇಂದ್ರ ಇಂಧನ ಮತ್ತು ಭಾರಿ ಕೈಗಾರಿಕೆ ಖಾತೆ ರಾಜ್ಯ ಸಚಿವ ಕೃಷ್ಣಪಾಲ್‌ ಗುರ್ಜರ್‌ ಹೇಳಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬರುವುದಕ್ಕೂ ಮೊದಲು ದೇಶದಲ್ಲಿ ದಲ್ಲಾಳಿಗಳ ಹಾವಳಿ ವಿಪರೀತವಾಗಿತ್ತು. ಯೋಜನೆಯ ಲಾಭು ಶೇ 15ರಷ್ಟು ಮಾತ್ರ ಫಲಾನುಭವಿಗಳಿಗೆ ತಲುಪುತ್ತಿದ್ದು ಉಳಿದದ್ದು ಮಧ್ಯವರ್ತಿಗಳ ಪಾಲಾಗುತ್ತಿತ್ತು. ಆದರೆ ಮೋದಿ ಸರ್ಕಾರ ಬಂದ ನಂತರ ಕ್ರಾಂತಿಕಾರಕ ಬದಲಾವಣೆಯಾಗಿದೆ. ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ರೈತರಿಗೆ ಬಿಡುಗಡೆಯಾಗುವ ₹ 6 ಸಾವಿರ ಹಣದಲ್ಲಿ ಒಂದು ಪೈಸೆಯೂ ವ್ಯರ್ಥವಾಗದೆ ನೇರವಾಗಿ ರೈತರ ಖಾತೆಗೆ ತಲುಪುತ್ತದೆ’ ಎಂದರು.

‘ಒಂದು ದೇಶ ಒಂದು ರೇಷನ್‌ ಕಾರ್ಡ್‌ ವ್ಯವಸ್ಥೆ ಜಾರಿಗೊಳಿಸಿದ ನಂತರ ಬಡವರಿಗೆ ಸಾಕಷ್ಟು ಅನುಕೂಲವಾಗಿದೆ. ಯಾವುದೇ ರಾಜ್ಯದ ವ್ಯಕ್ತಿ ತನ್ನ ಪಡಿತರ ಚೀಟಿಯಿಂದ ದೇಶದ ಯಾವುದೇ ಮೂಲೆಯಲ್ಲಿ ಪಡಿತರ ಪಡೆಯಬಹುದು. ಆಯುಷ್ಮಾನ್‌ ಭಾರತ್‌ ಯೋಜನೆಯಿಂದ ಕರ್ನಾಟಕದ ಶೇ 70ರಷ್ಟು ಜನರಿಗೆ ಅನುಕೂಲವಾಗಿದೆ. ಫಸಲ್‌ ಬಿಮಾ ಯೋಜನೆಯಲ್ಲಿ ವಿಮಾ ಕಂತನ್ನು ಶೇ 1.5– ಶೇ 2ಕ್ಕೆ ಇಳಿಸಿರುವುದು ಕೋಟ್ಯಂತರ ರೈತರಿಗೆ ಅನುಕೂಲವಾಗಿದೆ’ ಎಂದರು.

ಸಂವಾದ: ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳ 14 ಫಲಾನುಭವಿಗಳ ಜೊತೆಗೆ ಕೇಂದ್ರ ಸಚಿವರು ಸಂವಾದ ನಡೆಸಿದರು. ಎಂಬ್ರಾಯ್ಡರಿ ಟೇಲರಿಂಗ್‌ಗಾಗಿ ₹ 10 ಲಕ್ಷ ಸಾಲ ಪಡೆದಿರುವ ಶುಭಶ್ರೀ ‘ಸ್ವಾವಲಂಬನೆಯ ಜೀವನಕ್ಕಾಗಿ ಸಾಲ ಪಡೆದಿದ್ದೇನೆ, ಎಂಬ್ರಾಯ್ಡರಿ ಕುಸರಿ ಕಲೆಗೆ ಉದ್ಯಮ ರೂಪ ನೀಡುವ ಚಿಂತನೆ ಇದೆ’ ಎಂದರು. ‘ಸರಳವಾಗಿ ನಿಮಗೆ ಸಾಲ ದೊರೆತಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಅಭಿನಂದಿಸಿ’ ಎಂದು ತಿಳಿಸಿದರು.

ಮಾತೃವಂದನಾ ಯೋಜನೆಯ ಫಲಾನುಭವಿ, ಚಂದಗಾಲು ಗ್ರಾಮದ ಚೈತ್ರಾ ಕುಮಾರ್‌ ಯೋಜನೆಯಡಿ ಗರ್ಭಿಣಿಯರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ‘ಗರ್ಭಿಣಿಯರ ಆರೋಗ್ಯಕ್ಕಾಗಿ ಜಾರಿಗೊಳಿಸಿರುವ ಪಿ.ಎಂ ಮಾತೃವಂದನಾ ಯೋಜನೆ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಕಾಕ್ಲಿಯಾರ್‌ ಇಂಪ್ಲ್ಯಾಂಟ್‌ (ಕಿವುಡು ಸಮಸ್ಯೆ) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಾಲಕ ತೇಜಸ್‌ ತಾಯಿ ಜೊತೆ ಸಚಿವರು ಮಾತನಾಡಿದರು. ‘ಪ್ರತಿ ವರ್ಷ 15 ಸಾವಿರಕ್ಕೂ ಹೆಚ್ಚು ಮಕ್ಕಳು ಕಿವುಡು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮೋದಿ ಸಾರ್ಕಾರ ಬಾರದಿದ್ದರೆ ಮಕ್ಕಳು ಕಿವುಡರಾಗಿಯೇ ಉಳಿಯಬೇಕಾಗಿತ್ತು’ ಎಂದರು.

ಪಿ.ಎಂ ಆವಾಸ್‌ ಯೋಜೆಯಲ್ಲಿ ಸೂರು ಭಾಗ್ಯ ಪಡೆದ ಉಮ್ಮಡಹಳ್ಳಿ ಭವ್ಯಾ ಅವರ ಜೊತೆ ಸಚಿವರು ಮಾತನಾಡಿದರು. ‘ಗುಡಿಸಲಿನಲ್ಲಿ ಇದ್ದ ನಾವು ಆವಾಸ್‌ ಯೋಜನೆಯಡಿ ಮನೆ ಕಟ್ಟಿಕೊಂಡಿದ್ದೇವೆ’ ಎಂದರು. ‘ಜಲಜೀವನ ಮಿಷನ್‌ ಯೋಜನೆಯಡಿ ನಿಮ್ಮ ಮನೆಗೆ ನೀರಿನ ನಲ್ಲಿ ಕೂಡ ಬರಲಿದೆ’ ಎಂದು ಸಚಿವರು ಹೇಳಿದರು. ಕಲ್ಲಹಳ್ಲಿ ಸುಮಿತ್ರಾ ‘ಆವಾಸ್‌ ಯೋಜನೆ ಮೂಲಕ ಮನೆ ಕೊಟ್ಟ ಮೋದಿಗೆ ಧನ್ಯವಾದಗಳು’ ಎಂದರು.

ಸ್ವಚ್ಛಭಾರತ ಯೋಜನೆ ಅಡಿ ಶೌಚಾಲಯ ನಿರ್ಮಿಸಿಕೊಂಡಿರುವ ಕೀಲಾರದ ಪ್ರತಿಭಾ, ಹುಲ್ಕೆರೆಯ ನೇತ್ರಾ ‘ಖಾತೆಗೆ ₹ 12 ಸಾವಿರ ಹಣ ಬಂದಿದೆ’ ಎಂದು ಮಾಹಿತಿ ನೀಡಿದರು. ‘1 ದೇಶ 1 ರೇಷನ್‌ ಕಾರ್ಡ್‌’ ಯೋಜನೆಯಡಿ ಪಡಿತರ ಪಡೆಯುತ್ತಿರುವ ತೆಲಂಗಾಣದ ಹನೀಫ್‌, ಉತ್ತರ ಪ್ರದೇಶದ ರಾಜ್‌ಕುಮಾರ್‌, ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ ಎಂದರು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ರೇಷ್ಮೆ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಮುಖಂಡ ಬಿ.ಸೋಮಶೇಖರ್‌, ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಜಿಲ್ಲಾ ಪಂಚಾಯಿತಿ ಸಿಇಒ ದಿವ್ಯಾಪ್ರಭು ಇದ್ದರು.

ಲತಾಗೆ ₹ 1 ಕೋಟಿ ಸಾಲ

ಟೇಲರಿಂಗ್‌ ವೃತ್ತಿಗೆ ಗಾರ್ಮೆಂಟ್‌ ರೂಪ ನೀಡಿರುವ ಲತಾ ಅವರಿಗೆ ಸ್ಟ್ಯಾಂಡ್‌ ಅಪ್‌ ಇಂಡಿಯಾ ಯೋಜನೆ ಅಡಿ ₹ 1 ಕೋಟಿ ಸಾಲದ ಚೆಕ್‌ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಲತಾ ‘ಸಲದ ಹಣದಲ್ಲಿ ಗಾರ್ಮೆಂಟ್‌ಗೆ ಉದ್ಯಮ ರೂಪ ನೀಡಲಾಗುವುದು. ಮಹಿಳೆಯರಿಗೆ ಉದ್ಯೋಗ ನೀಡುವ ಉದ್ದೇಶವಿದೆ’ ಎಂದರು.

ಕೃಷ್ಣಪಾಲ್‌ ಗುರ್ಜರ್‌ ಮಾತನಾಡಿ ‘ಲತಾ ಅವರು ಇನ್ನುಮುಂದೆ ಉದ್ಯೋಗದಾತೆಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶವೂ ಇದೇ ಆಗಿದೆ’ ಎಂದರು.

ಹಣ ಯಾವುದಕ್ಕೂ ಸಾಲುತ್ತಿಲ್ಲ

ಪಿ.ಎಂ ಆವಾಸ್‌ ಯೋಜನೆ ಫಲಾನುಭವಿ ರಾಧಾ ಮಾತನಾಡಿ ‘ಮನೆ ನಿರ್ಮಾಣ ಮಾಡಲು ₹ 1.50 ಲಕ್ಷ ಮಂಜೂರು ಮಾಡಿದ್ದಾರೆ, ಆರೆ ಮನೆ ನಿರ್ಮಿಸಿಕೊಳ್ಳಲು ಅಷ್ಟು ಹಣ ಸಾಲುವುದಿಲ್ಲ. ಸಾಲದ ಮೊತ್ತವನ್ನು ಹೆಚ್ಚಳ ಮಾಡಬೇಕು’ ಎಂದು ಒತ್ತಾಯಿಸಿದರು.

ಕಿಸಾನ್‌ ಸಮ್ಮಾನ್‌ ಯೋಜನೆ ಫಲಾನುಭವಿ ಬಿ.ಗೌಡಗೆರೆ ಗ್ರಾಮದ ವಿಶ್ವನಾಥಶೆಟ್ಟಿ ಮಾತನಾಡಿ ‘ರೈತರ ಖಾತೆಗೆ ಬರುವ ₹ 6 ಸಾವಿರ ಹಣ ತೀರಾ ಕಡಿಮೆ, ಬೆಲೆ ಏರಿಕೆ ದಿನಗಳಲ್ಲಿ ಯಾವುದಕ್ಕೂ ಸಾಲುವುದಿಲ್ಲ. ಇದರ ಮೊತ್ತವನ್ನು ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ಸಚಿವ ಕೃಷ್ಣಪಾಲ್‌ ಗುರ್ಜರ್‌ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

62 ಅಲ್ಲ, ಇದು 22ರ ಭಾರತ

‘ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ಕ್ರಮಗಳಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ದೊಡ್ಡ ಗೌರವ ಸಿಕ್ಕಿದೆ. ಕೋವಿಡ್‌ ಸಂದರ್ಭದಲ್ಲಿ ಲಸಿಕೆ ಸಂಶೋಧನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಂದು ಜನರು ಮಾಸ್ಕ್‌ ತೊರೆಯುತ್ತಿರುವುದಕ್ಕೆ ನರೇಂದ್ರ ಮೋದಿ ಅವರೇ ಕಾರಣ’ ಎಂದು ಕೃಷ್ಣಪಾಲ್‌ ಗುರ್ಜರ್‌ ಹೇಳಿದರು.

‘ಯಮನ್‌, ಉಕ್ರೇನ್‌ನಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ಭಾರತೀಯರನ್ನು ರಕ್ಷಿಸುವಲ್ಲಿ ಪ್ರಧಾನಿ ಮೋದಿ ಅವರು ಪ್ರಮುಖ ಪಾತ್ರ ವಹಿಸಿದರು. ಅವರ ವಿದೇಶಾಂತಿ ನೀತಿ ವಿಶ್ವಪ್ರಸಿದ್ಧಿಯಾಗಿದೆ’ ಎಂದರು.

ಮೋದಿ ಹೆಸರು ಪಠಿಸಿದ ಗುರ್ಜರ್‌

ಸಚಿವ ಕೃಷ್ಣಪಾಲ್‌ ಗುರ್ಜರ್‌ ಅವರು ಇಡೀ ಸಂವಾದದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನೇ ಹೆಚ್ಚು ಪಠಿಸಿದರು. ಮಾತುಮಾತಿಗೂ ಮೋದಿ ಅವರ ಹೆಸರನ್ನೇ ಹೆಚ್ಚು ಬಳಿಸಿದರು. ಪ್ರತಿ ಫಲಾನುಭವಿ ಜೊತೆ ಮಾತನಾಡುವಾಗಲೂ ‘ಮೋದಿ ಅವರಿಗೆ ಅಭಿನಂದಿಸಿ’ ಎಂದು ಹೇಳುವುದನ್ನು ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT