ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಮಂಗಲ: ಕುಸಿಯುವ ಸ್ಥಿತಿಯಲ್ಲಿ ಯೋಗಾನರಸಿಂಹ ದೇಗುಲ

ದಡಿಗ: ಗಂಗರ ಕಾಲದ ವಾಸ್ತು ಶಿಲ್ಪ ಹೊಂದಿರುವ ಪುರಾತನ ದೇವಾಲಯ
Last Updated 27 ಮಾರ್ಚ್ 2023, 6:34 IST
ಅಕ್ಷರ ಗಾತ್ರ

ನಾಗಮಂಗಲ: ತಾಲ್ಲೂಕಿನ ಬೆಳ್ಳೂರು ಹೋಬಳಿಯ ದಡಿಗ ಗ್ರಾಮದಲ್ಲಿ ಹಲವು ಐತಿಹಾಸಿಕ ದೇವಾಲಯಗಳಿದ್ದು, ಅವುಗಳಲ್ಲಿ ಪ್ರಸಿದ್ಧವಾಗಿರುವ ಯೋಗಾನರಸಿಂಹ ದೇವಾಲಯವು ಸಂಪೂರ್ಣ ಶಿಥಿಲಗೊಂಡಿದೆ. ನಿರ್ವಹಣೆಯಿಲ್ಲದೆ ಗರ್ಭಗೃಹದ ಗೋಡೆಗಳು, ಕಂಬಗಳೂ ಸೇರಿದಂತೆ ಸಂಪೂರ್ಣ ದೇವಾಲಯವೇ ಕುಸಿಯುವ ಭೀತಿಯಲ್ಲಿದೆ.

ತಾಲ್ಲೂಕಿನ ಬೆಳ್ಳೂರು ಕ್ರಾಸ್‌ನಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ದಡಿಗನ ಕೆರೆಯ ಕೋಡಿಯ ಬಳಿ ಇದ್ದ ಕೋಡಿಹಳ್ಳಿಯು ಹಿಂದೆ ಅಗ್ರಹಾರವಾಗಿತ್ತು ಎನ್ನಲಾಗುತ್ತಿದೆ. ಕೆರೆಯ ಉತ್ತರ ದಿಕ್ಕಿಗೆ ದಡಿಗ ಗ್ರಾಮವಿದ್ದು, ಇದು ಗಂಗರ ಅರಸನಾದ ದಡಿಗನ ನೆನಪನ್ನು ತರುತ್ತದೆ.

ಗ್ರಾಮದಲ್ಲಿರುವ ಯೋಗಾನರಸಿಂಹ ದೇವಾಲಯ ಮತ್ತು ಕೋಡಿಹಳ್ಳಿಯ ದಡಿಗೇಶ್ವರ ದೇವಾಲಯಗಳು ಇಟ್ಟಿಗೆಗಳಿಂದ ನಿರ್ಮಾಣವಾಗಿದ್ದು, ಮೇಲ್ನೋಟಕ್ಕೆ ಇತ್ತೀಚೆಗೆ ನಿರ್ಮಾಣ ವಾದಂತೆ ಕಂಡುಬಂದರೂ ದೇವಾಲಯದ ಒಳಭಾಗದಲ್ಲಿರುವ ಕಂಬಗಳು, ಅವುಗಳ ನಡುವಿನ ಅಂಕಣದ ಚಾವಣಿಯಲ್ಲಿ ಉಬ್ಬು ಶಿಲ್ಪದ ಮಾದರಿಯಲ್ಲಿ ರಚಿತವಾಗಿರುವ ಪೂರ್ಣ ಅರಳಿದ ಕಮಲ ಸೇರಿದಂತೆ ಹಲವು ಬಗೆಯ ಕೆತ್ತನೆಗಳು ಈ ದೇವಾಲಯವು ಗಂಗರ ಕಾಲದ ವಾಸ್ತು ಶಿಲ್ಪದ ಮಾದರಿಯಲ್ಲಿ ಕಾಣುತ್ತದೆ. ಅಲ್ಲದೆ, ದೇವಾಲಯದ ಕಂಬಗಳು ಗಂಗರ ಕಾಲದ ಪ್ರಾರಂಭಿಕ ಘಟ್ಟದ ಸ್ವರೂಪವನ್ನು ಹೋಲುತ್ತವೆ. ದೇವಾಲಯದ ಗರ್ಭಗುಡಿಯಲ್ಲಿರುವ ಯೋಗಾನರಸಿಂಹ ಮೂರ್ತಿ ಸುಂದರ ವಾಗಿದ್ದು, ಭಕ್ತರನ್ನು ಸೆಳೆಯುತ್ತಿದೆ.

ನಿರ್ವಹಣೆ ಕೊರತೆ: ಗ್ರಾಮದ ಕೆರೆಯ ಸಮೀಪ ಪುಟ್ಟ ಗುಡ್ಡದ ಮೇಲಿರುವ ಯೋಗಾನರಸಿಂಹ ದೇವಾಲಯವು ಪುರಾತನ ಕಾಲದಲ್ಲಿ ಗ್ರಾಮದ ವೈಭವ ಸಾರುತ್ತಿತ್ತು. ಕಾಲ ಕಳೆದಂತೆ ಗ್ರಾಮಸ್ಥರು, ದೇವಾಲಯದ ಒಕ್ಕಲು ಮನೆತನ ಮತ್ತು ಸಾರ್ವಜನಿಕರ ನಿರ್ಲಕ್ಷ್ಯಕ್ಕೆ ಒಳಗಾಗಿ ಇದೀಗ ಕುಸಿಯುವ ಭೀತಿಯಲ್ಲಿದೆ. ದೇವಾಲಯದ ಮೇಲೆ ಆಲದ ಗಿಡ, ಬಸುರಿಗಿಡ ಸೇರಿದಂತೆ ವಿವಿಧ ಬಗೆಯ ಗಿಡಗಂಟಿಗಳ ಬೇರುಗಳು ದೇವಾಲಯದ ಗೋಡೆಗಳನ್ನು ಆವರಿಸಿವೆ. ಗೋಡೆಯ ಗಾರೆ ಕಿತ್ತು ಬಂದಿದ್ದು, ಇಟ್ಟಿಗೆಗಳೂ ಕುಸಿದಿವೆ.

ಗರ್ಭಗೃಹದ ಗೋಡೆಗಳು ಬಿರುಕು ಬಿಟ್ಟಿದ್ದು, ಮಳೆಯ ನೀರು ದೇವಾಲಯದ ಒಳಕ್ಕೆ ಬರುವಂತಾಗಿದೆ. ಗೋಡೆಗಳು ಬೀಳುವ ಆತಂಕದಿಂದ ಯಾರೋ ಕಲ್ಲಿನ ಕಂಬಗಳನ್ನು ದೇವಾ ಲಯದ ಗೋಡೆಗೆ ಆಸರೆಯಾಗಿ ನಿಲ್ಲಿಸಿ ದ್ದಾರೆ. ಸ್ಥಳೀಯರೊಬ್ಬರ ಆಸಕ್ತಿಯಿಂದ ದಿನಕ್ಕೊಮ್ಮೆ ಪೂಜೆ ನಡೆಯುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ‌. ಗರ್ಭಗೃಹದಲ್ಲಿರುವ ಯೋಗಾನರಸಿಂಹ ಮೂರ್ತಿ ದೈವಕಳೆಯನ್ನು ತುಂಬಿಕೊಂಡಿದೆ.

ಗ್ರಾಮದ ಪುರಾತನ ದೇವಾಲಯಗಳಲ್ಲಿ ಪ್ರಮುಖವಾಗಿರುವ ಯೋಗಾನರಸಿಂಹ ದೇವಾಲಯವು ಗ್ರಾಮದ ಇತಿಹಾಸದ ಕುರುಹಾಗಿದ್ದು, ನಿರ್ಲಕ್ಷ್ಯಕ್ಕೆ ಒಳಗಾಗಿ ಶಿಥಿಲಾವಸ್ಥೆ ತಲುಪಿದೆ. ಯೋಗಾನರಸಿಂಹ ಸ್ವಾಮಿಯು ಗ್ರಾಮದ ಶಕ್ತಿ ದೇವರಾಗಿದ್ದು, ಗ್ರಾಮದಲ್ಲಿ ಕ್ಷಾಮ ಬಂದಾಗ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹರಿಸೇವೆ ಮಾಡಿದರೆ ಮಳೆಯಾಗುತ್ತಿತ್ತು ಎಂಬ ಪ್ರತೀತಿಯಿದೆ‌. ದೇವಾಲಯವು ತಾಲ್ಲೂಕು ಆಡಳಿತ ಮತ್ತು ಪುರಾತತ್ವ ಇಲಾಖೆಗಳ ನಿರ್ಲಕ್ಷ್ಯದಿಂದ ಕಣ್ಮರೆಯಾಗುವತ್ತ ಸಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಇಲಾಖೆ ಗಮನಹರಿಸಿ ದೇವಾಲಯವನ್ನು ರಕ್ಷಿಸಬೇಕಾಗಿದೆ ಎಂದು ಗ್ರಾಮದ ಮುಖಂಡ ದಡಿಗ ಸತೀಶ್ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT