ಮೈಸೂರು: ಬಾಲಕನ ಅಪಹರಣ; ಕೊಲೆ

ಹನಗೋಡು: ಇಲ್ಲಿನ ತರಕಾರಿ ವ್ಯಾಪಾರಿ ನಾಗರಾಜ್ ಅವರ ಪುತ್ರ ಕಾರ್ತಿಕ್ನನ್ನು (10) ಅಪಹರಿಸಿದ ದುಷ್ಕರ್ಮಿಗಳು ₹ 4 ಲಕ್ಷಕ್ಕೆ ಬೇಡಿಕೆ ಇಟ್ಟು, ನಂತರ ಕೊಲೆ ಮಾಡಿದ್ದಾರೆ. ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಬುಧವಾರ ರಾತ್ರಿ 7.30ರಲ್ಲಿ ಪಟಾಕಿ ತರಲು ಅಂಗಡಿಗೆ ತೆರಳಿದ್ದ ವೇಳೆ ಬಾಲಕನ ಅಪಹರಣವಾಗಿತ್ತು. ರಾತ್ರಿ 8.15ಕ್ಕೆ ಕರೆ ಮಾಡಿದ ಆರೋಪಿಯೊಬ್ಬ ಬಾಲಕನನ್ನು ಬಿಡಲು ₹ 4 ಲಕ್ಷ ನೀಡುವಂತೆ ಆಗ್ರಹಿಸಿದ್ದ. ಆರೋಪಿಗಾಗಿ ಪೊಲೀಸರು ನಾಕಾಬಂದಿ ರಚಿಸಿದ್ದರೂ ಸುಳಿವು ಸಿಕ್ಕಿರಲಿಲ್ಲ.
ಗುರುವಾರ ಬೆಳಿಗ್ಗೆ ಗ್ರಾಮಕ್ಕೆ ಸಮೀಪದ ಕೆರೆಯ ಬಳಿ ಬಾಲಕನ ಶವ ಪತ್ತೆಯಾಯಿತು. ಮೊಬೈಲ್ ಫೋನ್ ಕರೆಯನ್ನು ಆಧರಿಸಿ ಆರೋಪಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಬಾಲಕನ ತಂದೆಯು ಆರ್ಥಿಕವಾಗಿ ಸ್ಥಿತಿವಂತರಲ್ಲ. ಅಪಹರಣದ ಉದ್ದೇಶ ಸ್ಪಷ್ಟವಾಗಿಲ್ಲ. ಹಣಕ್ಕಾಗಿ ಒಂದೇ ಕರೆಯನ್ನು ಮಾಡಿರುವುದು ಶಂಕಾಸ್ಪದವಾಗಿದೆ. ವಿಚಾರಣೆಯ ನಂತರವಷ್ಟೇ ಕಾರಣ ತಿಳಿಯಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.