ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯಲ್ಲಿ ಆರ್ಥಿಕ ದುರುಪಯೋಗವಾಗಿದೆ ಎಂದು ಕೆಲವು ನೌಕರರು ಅನಗತ್ಯವಾಗಿ ವಿದ್ವಾಂಸರು ಹಾಗೂ ಶಾಸಕರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಶ್ವವಿದ್ಯಾಲಯದ ಕುಲಪತಿ ನಾಗೇಶ್ ವಿ ಬೆಟ್ಟಕೋಟೆ ತಿಳಿಸಿದ್ದಾರೆ.
ವಿ.ವಿಯಲ್ಲಿ ಈ ಹಿಂದೆ 21 ತಾತ್ಕಾಲಿಕ ಹಾಗೂ 10 ಮಂದಿ ಹೊರಗುತ್ತಿಗೆ ನೌಕರರ ನೇಮಕಾತಿಯು ಆರ್ಥಿಕ ಇಲಾಖೆಯ ಅನುಮೋದನೆ ಇಲ್ಲದೇ ನಡೆದಿತ್ತು. ಇವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸರ್ಕಾರ ಸೆ. 2ರಂದು ಕಟ್ಟುನಿಟ್ಟಾಗಿ ಸೂಚಿಸಿದೆ. ಇದರಿಂದ ವಿಚಲಿತರಾಗಿರುವ ಕೆಲವು ನೌಕರರು ದಿಕ್ಕು ತಪ್ಪಿಸುವ ಪ್ರಯತ್ನದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಶ್ವವಿದ್ಯಾಲಯಕ್ಕೆ ಸರ್ಕಾರ ನೀಡಿದ ಅನುದಾನ ಹಾಗೂ ಅದನ್ನು ವೆಚ್ಚ ಮಾಡಿರುವುದಕ್ಕೆ ಸಂಬಂಧಿಸಿದಂತೆ ಪ್ರತಿ
ವರ್ಷ ಲೆಕ್ಕ ಪರಿಶೋಧನಾ ವರದಿಯನ್ನು ಹಣಕಾಸು, ಪ್ರಶಿಕ್ಷಣ ಮತ್ತು ಪ್ರಶಾಸನ ಸಮಿತಿ ಸಭೆಗಳ ಮುಂದೆ ಮಂಡಿಸಿ ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದಿದ್ದಾರೆ.
ರಾಜೀವ್ ತಾರಾನಾಥ್ ಅವರು ವಿಶ್ವವಿದ್ಯಾಲಯದ ಶೈಕ್ಷಣಿಕ ಬೆಳವಣಿಗೆ ಬಗ್ಗೆ ಕಾಳಜಿ ವಹಿಸುತ್ತಿರುವುದು ಸ್ವಾಗ
ತಾರ್ಹ. ದೊಡ್ಡ ದೊಡ್ಡ ವಿದ್ವಾಂಸರನ್ನು ಆಹ್ವಾನಿಸಿ ಬೋಧನೆ ಮತ್ತು ಪ್ರದರ್ಶನ ಆಯೋಜಿಸಲು ಅನುದಾನದ ಕೊರತೆ ಉಂಟಾಗಿದೆ. ಅವರ ಹೇಳಿಕೆಯಂತೆ ರಾಷ್ಟ್ರ ವಿಶ್ವವಿದ್ಯಾಲಯಗಳ ವಿಷಯ ತಜ್ಞರ ಸಮಿತಿಯನ್ನು ರಚಿಸಿ ಶೈಕ್ಷಣಿಕ ಏಳಿಗೆಯತ್ತ ಸಾಗಲು ಶ್ರಮಿಸಲಾಗುತ್ತಿದೆ. ವಿಶ್ವವಿದ್ಯಾಲಯಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ವಿ.ವಿ ಉತ್ತಮ ಸ್ಥಾನದಲ್ಲಿದ್ದು, ಯುಜಿಸಿಯಿಂದ ಸ್ವಚ್ಛ ಕ್ಯಾಂಪಸ್ನಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಕೌಶಲ್ಯಾಭಿವೃದ್ದಿ ಮತ್ತು ಅಂತರಶಿಸ್ತಿನ ಅಧ್ಯಯನ ಅಗತ್ಯ ಇರುವುದರಿಂದ ಪ್ರದರ್ಶನ ಕಲೆಗಳ ಸಂಬಂಧಿತ ವಿಷಯಗಳನ್ನು ಪರಿಚಯಿಸುವುದಕ್ಕಾಗಿ ಪ್ರಶಿಕ್ಷಣ ಮತ್ತು ಪ್ರಶಾಸನ ಸಮಿತಿ ಸಭೆಗಳ ಅನುಮೋದನೆಯೊಂದಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿ ಯಾವುದೇ ರೀತಿಯ ದುರಾಡಳಿತ, ಏಕಚಕ್ರಾದಿಪತ್ಯ, ಆರ್ಥಿಕ ದುರುಪಯೋಗ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ಅವ್ಯವಹಾರದ ಆರೋಪ ನನ್ನದ್ದಲ್ಲ’: ‘ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಆರ್ಥಿಕ ಅವ್ಯವಹಾರ ನಡೆದಿದೆ ಎಂಬ ಆರೋಪವನ್ನು ನಾನು ಮಾಡಿಲ್ಲ’ ಎಂದು ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ತಿಳಿಸಿದ್ದಾರೆ. ‘ಸಂಗೀತ ವಿ.ವಿಯಿಂದ ವಿದ್ವಾಂಸರು ಹಾಗೂ ಕಲಾವಿದರು ಹೊರಹೊಮ್ಮಿಲ್ಲ ಎಂದಷ್ಟೇ ನಾನು ಹೇಳಿಕೆ ನೀಡಿದ್ದೆ. ಉಳಿದ ಆರೋಪಗಳನ್ನು ಇತರರು ಪತ್ರಿಕಾ ಹೇಳಿಕೆಯಲ್ಲಿ ಸೇರಿಸಿದ್ದಾರೆ. ಇದು ನನ್ನ ಗಮನಕ್ಕೆ ಬಂದಿರಲಿಲ್ಲ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.