ಮೈಸೂರು: ‘ವಾಣಿವಿಲಾಸ ನೀರು ಸರಬರಾಜು ವಿಭಾಗಕ್ಕೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ಕೌನ್ಸಿಲ್ ಸಭೆಯ ಒಪ್ಪಿಗೆ ಪಡೆಯದೇ ನೇಮಕಾತಿ ನಡೆಸಲಾಗಿದ್ದು, ಇದನ್ನು ತಕ್ಷಣದಿಂದಲೇ ರದ್ದುಗೊಳಿಸಬೇಕು’ ಎಂದು ಮೇಯರ್ ತಸ್ನಿಂ, ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮೇಯರ್ ಈ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಆಡಳಿತ–ವಿರೋಧ ಪಕ್ಷದ ಸದಸ್ಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಪಾಲಿಕೆಯ ಬಹುತೇಕ ಅಧಿಕಾರಿಗಳು ಮೇಯರ್, ಸದಸ್ಯರಿಗೆ ಕಿಮ್ಮತ್ತು ಕೊಡುತ್ತಿಲ್ಲ. ಕೌನ್ಸಿಲ್ ತೆಗೆದುಕೊಂಡ ನಿರ್ಣಯ ಪಾಲಿಸುತ್ತಿಲ್ಲ ಎಂದು ಕಿಡಿಕಾರಿದರು.
ಕಾನೂನು ಬಾಹಿರವಾಗಿ ನಡೆಸಿದ ನೇಮಕಾತಿ ರದ್ದುಗೊಳಿಸಲೇ ಬೇಕು ಎಂದು ಪಟ್ಟು ಹಿಡಿದರು. ವಾಣಿವಿಲಾಸ ನೀರು ಸರಬರಾಜು ವಿಭಾಗದ ಅಧಿಕಾರಿ ಸ್ಪಷ್ಟನೆ ನೀಡಲು ಮುಂದಾದರೂ, ಯಾರೊಬ್ಬರೂ ಕಿವಿಗೊಡಲಿಲ್ಲ. ಮೇಯರ್ ಸಹ ನೇಮಕಾತಿ ರದ್ದತಿಗೆ ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತ ಗುರುದತ್ತ ಹೆಗಡೆ, ‘ವಾಣಿವಿಲಾಸ ನೀರು ಸರಬರಾಜು ವಿಭಾಗಕ್ಕೆ ಹೊರಗುತ್ತಿಗೆ ಆಧಾರದಲ್ಲಿ 106 ನೌಕರರನ್ನು ಮೇ 1ರಿಂದ ನೇಮಕ ಮಾಡಿಕೊಳ್ಳಲಾಗಿದೆ. ಇವರಲ್ಲಿ 68 ಜನರು ಈಗಾಗಲೇ ಕಬಿನಿ, ವಾಣಿ ವಿಲಾಸ ನೀರು ಸರಬರಾಜು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದವರು. ಉಳಿದ 38 ಜನರು ಹೊಸಬರು. ಟೆಂಡರ್ ಮೂಲಕ ಡಿಎಂಇಯ ಮೌಖಿಕ ನಿರ್ದೇಶನದಂತೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಘಟನೋತ್ತರ ಅನುಮತಿ ಪಡೆಯಲಾಗುವುದು. ಅನುಮೋದನೆಯ ನಿರೀಕ್ಷೆ ಮೇರೆಗೆ ಈ ನೇಮಕಾತಿ ನಡೆದಿದೆ’ ಎಂದರು.
ಇದಕ್ಕೆ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ‘ನಿರೀಕ್ಷೆ ಮೇರೆಗೆ ನಮ್ಮ ಕೆಲಸಗಳನ್ನು ಮಾಡಿಕೊಡಿ. ನೇಮಕಾತಿ ರದ್ದುಗೊಳಿಸಿ’ ಎಂದು ಆಗ್ರಹಿಸಿದರು.
ಗುರುದತ್ತ ಹೆಗಡೆ ಮಾತನಾಡಿ, ‘ಈ ಹಿಂದಿನಿಂದಲೂ ಕೆಲಸ ಮಾಡುತ್ತಿದ್ದ 68 ನೌಕರರಿಗೆ ಪೀಸ್ ವರ್ಕ್ ಹೆಡ್ನಿಂದ ಸಂಬಳ ಕೊಡಲಾಗುತ್ತಿತ್ತು. ಇದು ಕಾನೂನು ಪ್ರಕಾರ ಅಪರಾಧ. ಈ ಪದ್ಧತಿ ಮುಂದುವರಿಸಲು ಅವಕಾಶವಿಲ್ಲ. ಮುಂದುವರೆಸಿದರೆ ನಾನು ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಅದೇ ರೀತಿ ಹಾಲಿ ಚಾಲ್ತಿಯಲ್ಲಿರುವ ಟೆಂಡರ್ ರದ್ದು ಪಡಿಸಲು ಸಾಧ್ಯವಿಲ್ಲ. ನಿಮ್ಮ ಒತ್ತಡಕ್ಕೆ ಮಣಿದು ಟೆಂಡರ್ ರದ್ದುಗೊಳಿಸಿದರೆ, ಮರು ಕ್ಷಣದಿಂದಲೇ ನಗರದ ಬಹುತೇಕ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಲಿದೆ. ಟೆಂಡರ್ ರದ್ದು ಮಾಡುವುದು ಬೇಡ’ ಎಂದು ಹೇಳಿದರು.
ಸುದೀರ್ಘ ಚರ್ಚೆಯ ಬಳಿಕ, ‘ನೇಮಕಾತಿಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಅಡ್ವೈಸರಿ ಸಮಿತಿಯಲ್ಲಿ ಚರ್ಚಿಸೋಣ. ಹೊಸ ಟೆಂಡರ್ ಪ್ರಕ್ರಿಯೆ ನಡೆಯುವ ತನಕವೂ ಇರೋ ಸ್ಥಿತಿಯನ್ನೇ ಮುಂದುವರಿಸಿ’ ಎಂದು ಕೌನ್ಸಿಲ್ ಪರವಾಗಿ ಮೇಯರ್ ತಸ್ನಿಂ ಸಮ್ಮತಿ ನೀಡುವ ಮೂಲಕ ಬಿಗಡಾಯಿಸಿದ್ದ ನೇಮಕಾತಿ ವಿವಾದಕ್ಕೆ ತೆರೆ ಎಳೆದರು.
ಕೆಲಸ ನಿಲ್ಲಿಸಿ, ಕ್ರಮ ಜರುಗಿಸಿ
‘ನಗರದ ವ್ಯಾಪ್ತಿಯಲ್ಲಿ ಸೆಸ್ಕ್ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ನಡೆಸುತ್ತಿದೆ. ಆದರೆ, ಗುತ್ತಿಗೆದಾರರು ಈ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಐದು ತಿಂಗಳಿಂದಲೂ ಈ ವಿಷಯ ಪ್ರಸ್ತಾಪಿಸುತ್ತಿದ್ದರೂ, ಅನ್ಯಾಯ ನಡೆಯುವುದು ನಿಂತಿಲ್ಲ’ ಎಂದು ಸದಸ್ಯ ರಮೇಶ್ ದೂರಿದರು.
ಇದಕ್ಕೆ ಮೇಯರ್ ಸೇರಿದಂತೆ ಅನೇಕ ಸದಸ್ಯರು ದನಿಗೂಡಿಸಿದರು.
‘ಪಾಲಿಕೆ ವ್ಯಾಪ್ತಿಯ ಅಭಿವೃದ್ಧಿ ಅಧಿಕಾರಿಗಳು (ಡಿಒ) ಅನ್ಯಾಯ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ. ವರ್ಕ್ಸ್ ಕಮಿಟಿ ಶಿಫಾರಸು ಮಾಡಿದ್ದರೂ ಕೆಲಸ ನಿಲ್ಲಿಸುತ್ತಿಲ್ಲ. ನಿರ್ಲಕ್ಷ್ಯ ತೋರುತ್ತಿರುವ ಡಿಒಗಳನ್ನು ತಕ್ಷಣವೇ ಅಮಾನತುಗೊಳಿಸಿ’ ಎಂದು ರಮೇಶ್ ಆಗ್ರಹಿಸಿದರು.
ಮೇಯರ್ ತಸ್ನಿಂ, ‘ಆಯುಕ್ತರು ಸೇರಿದಂತೆ ಎಸಿಗಳು, ಸೆಸ್ಕ್ ಅಧಿಕಾರಿಗಳ ಸಭೆಯನ್ನುಶೀಘ್ರದಲ್ಲೇ ನಡೆಸುತ್ತೇವೆ. ನಮ್ಮ ಸೂಚನೆ ಪಾಲಿಸದಿದ್ದರೇ, ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.
ಪಾಲಿಕೆಯ ಸೋಮವಾರದ ಸಭೆಗೆ ಹಲವು ಸದಸ್ಯರು ಗೈರಾಗಿದ್ದರು.
ವಾರ್ಡ್ ನಂಬರ್ 18ರ ಸದಸ್ಯರಾಗಿ ಈಚೆಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಬಿ.ವಿ.ರವೀಂದ್ರ ಚಾಮುಂಡೇಶ್ವರಿ ದೇವಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಸಿಂಹ ಆರೋಪಿಸ್ತಾರೆ; ತಿಳಿಯದೆ ಹೇಗೆ ಅನುಮತಿ ಕೊಡಲಿ?
‘ಪಾಲಿಕೆ ಸದಸ್ಯರ ವಿರುದ್ಧ ಸಂಸದ ಪ್ರತಾಪ ಸಿಂಹ ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಇದೀಗ ಚಾಮರಾಜ ಕ್ಷೇತ್ರದ ಒಳಚರಂಡಿ ಅಭಿವೃದ್ಧಿಗೆ ಶಾಸಕ ಎಲ್.ನಾಗೇಂದ್ರ ಮುಖ್ಯಮಂತ್ರಿ ಅವರ ವಿವೇಚನಾ ನಿಧಿಯಿಂದ ₹10 ಕೋಟಿ ಅನುದಾನ ತಂದಿದ್ದಾರೆ. ಇದರ ಬಗ್ಗೆ ಕೂಲಂಕಷವಾಗಿ ಚರ್ಚಿಸದೆ ತರಾತುರಿಯಲ್ಲಿ ಅನುಮತಿ ಕೊಡೋದು ಹೇಗೆ?’ ಎಂದು ಸದಸ್ಯ ಅಯೂಬ್ಖಾನ್ ತಕರಾರು ತೆಗೆದರು.
ಅಯೂಬ್ ತಕರಾರಿಗೆ ಮೇಯರ್ ಸೇರಿದಂತೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ತಕರಾರು ಮಾಡೋದಿದ್ರೇ ಹಿಂದಿನ ಸಭೆಯಲ್ಲೇ ಆಕ್ಷೇಪ ವ್ಯಕ್ತಪಡಿಸಬೇಕಿತ್ತು ಎಂದು ತಸ್ನಿಂ ಹೇಳಿದರು.
‘ಚಾಮರಾಜ ಕ್ಷೇತ್ರದ ವಾರ್ಡ್ ಸದಸ್ಯರಾಗಿ ನಾವೂ ಇದ್ದೇವೆ. ಎಲ್ಲೆಲ್ಲಿ ಕಾಮಗಾರಿ ನಡೆಸುತ್ತಾರೆ? ಎಂಬ ಮಾಹಿತಿ ಕೊಡಿ’ ಎಂದು ಸದಸ್ಯರಾದ ಆರ್.ನಾಗರಾಜು, ಪ್ರೇಮಾ ಶಂಕರಲಿಂಗೇಗೌಡ ಕೇಳಿದರು.
ಕಾಮಗಾರಿ ಮುಗಿದ ಬಳಿಕ ಪರಿಶೀಲನೆ
‘ನಗುವಿನಹಳ್ಳಿ ರಸ್ತೆಯಲ್ಲಿರುವ ತೀಕ್ಷ್ಣ ತಿರುವನ್ನು ನೇರಗೊಳಿಸುವಂತೆ ಶಾಸಕ ಜಿ.ಟಿ.ದೇವೇಗೌಡ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಪ್ರಸ್ತಾಪಿಸಿದ್ದರು. ಲೋಕೋಪಯೋಗಿ ಇಲಾಖೆ ಅಲ್ಲಿ ರಸ್ತೆ ಕಾಮಗಾರಿ ಮುಗಿಸಿದ ಬಳಿಕ ಪಾಲಿಕೆಯ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದೇನಾ ಕೌನ್ಸಿಲ್ ಶಾಸಕರಿಗೆ ಕೊಡುವ ಗೌರವ’ ಎಂದು ಅಯೂಬ್ ಖಾನ್ ತರಾಟೆಗೆ ತೆಗೆದುಕೊಂಡರು.
ಮೇಯರ್ ತಸ್ನಿಂ, ‘ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯುವೆ. ಪಾಲಿಕೆ ಅಗತ್ಯ ಜಾಗ ಕೊಡಲಿದೆ. ರಸ್ತೆ ನೇರ ಮಾಡಿಕೊಡಿ ಎಂದು ಕೋರುವೆ’ ಎಂದು ಹೇಳಿದರು.
ನೇರ ಪಾವತಿಗಾಗಿ ಪೌರ ಕಾರ್ಮಿಕರ ಪಟ್ಟು
ನೇರ ಪಾವತಿ ಮತ್ತು ಪಾಲಿಕೆ ಅನುದಾನದ ಪಾವತಿಯಡಿ ಆಯ್ಕೆಯಾಗಿರುವ ಪೌರ ಕಾರ್ಮಿಕರಿಗೆ ಜಿಲ್ಲಾಧಿಕಾರಿ ಆದೇಶ ನೀಡಿ ನಾಲ್ಕು ತಿಂಗಳು ಕಳೆದರೂ, ನೇರ ಪಾವತಿ ಮಾಡಿಲ್ಲ ಎಂದು ಆರೋಪಿಸಿ ಪೌರ ಕಾರ್ಮಿಕರು ಮೈಸೂರು ನಗರ ಪಾಲಿಕೆ ಕಾಯಂ ಹಾಗೂ ಗುತ್ತಿಗೆ ಪೌರ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪಾಲಿಕೆ ಕಚೇರಿ ಮುಂಭಾಗ ಪ್ರತಿಭಟಿಸಿದರು.
‘ಏ.1ರಂದೇ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೂ, ನೇರ ಪಾವತಿ ಮಾಡಿಲ್ಲ. ಸಂಬಳವನ್ನು ಪೌರ ಕಾರ್ಮಿಕರ ಖಾತೆಗೆ ಜಮಾ ಮಾಡಿಲ್ಲ. ಈ ಕೂಡಲೇ ನೇರ ಪಾವತಿ ಮಾಡಬೇಕು. ಪಾಲಿಕೆ ಅನುದಾನ ಪಾವತಿ ಜಮಾ ಮಾಡಬೇಕು. ಇಲ್ಲವಾದರೆ ಎಲ್ಲಾ ವಾರ್ಡಿನ ಸ್ವಚ್ಛತೆ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಮಹದೇವ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.