ಮೈಸೂರು: ಅಕ್ಷರ ದಾಸೋಹದ ಬಿಸಿಯೂಟ ತಯಾರಿಕರಿಗೆ 4 ತಿಂಗಳ ವೇತನ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.
ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರು ಕಳೆದ 17 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕನಿಷ್ಠ ವೇತನ ಕಾಯ್ದೆಗೆ ಒಳಪಡದೇ ತೀರಾ ಕಡಿಮೆ ವೇತನ ಪಡೆಯುತ್ತಿದ್ದಾರೆ. ಈಗ ಇವರಿಗೆ ಕಳೆದ 4 ತಿಂಗಳುಗಳಿಂದಲೂ ವೇತನ ನೀಡಿಲ್ಲ. ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ ಎಂದು ಕಾರ್ಯಕರ್ತರು ಕಿಡಿಕಾರಿದರು.
ಒಂದು ಕಡೆ ಶಾಲೆಗಳಲ್ಲಿ ಅಡುಗೆ ಕೆಲಸ ಇಲ್ಲ. ಮತ್ತೊಂದು ಕಡೆ ಕೂಲಿ ಕೆಲಸವೂ ಇಲ್ಲ. ಬೇರೆ ಅಸಂಘಟಿತ ಕಾರ್ಮಿಕರಿಗೆ ₹ 5 ಸಾವಿರ ಪರಿಹಾರ ನೀಡಲಾಯಿತು. ಆದರೆ, ಬಿಸಿಯೂಟ ತಯಾರಿಕರಿಗೆ ಯಾವುದೇ ಲಾಕ್ಡೌನ್ ಪರಿಹಾರ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ವೇತನ ಬಿಡುಗಡೆ ಮಾಡಬೇಕು, ಲಾಕ್ಡೌನ್ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಮುಖಂಡರಾದ ಕೆ.ಜಿ.ಸೋಮರಾಜೇಅರಸ್, ವೈ.ಮಹದೇವಮ್ಮ, ಪದ್ಮಮ್ಮ, ಸಾವಿತ್ರಮ್ಮ, ಸರಸ್ವತಿ ಹಾಗೂ ಇತರರು ಇದ್ದರು.
ಬಾಲಕಿ ಮೇಲಿನ ಅತ್ಯಾಚಾರಕ್ಕೆ ಖಂಡನೆ
ಮೈಸೂರು: ಧಾರವಾಡ ತಾಲ್ಲೂಕಿನಲ್ಲಿ ಈಚೆಗೆ ನಡೆದ ಬಾಲಕಿ ಮೇಲಿನ ಅತ್ಯಾಚಾರ ಘಟನೆಯನ್ನು ಗಂಧದ ಗುಡಿ ಫೌಂಡೇಷನ್ನ ಕಾರ್ಯಕರ್ತರು ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಖಂಡಿಸಿ, ಪ್ರತಿಭಟನೆ ನಡೆಸಿದರು.
ಇದೊಂದು ಅತ್ಯಂತ ಹೇಯ ಕೃತ್ಯ. ಆರೋಪಿಯ ಮೇಲೆ ಗುರುತರವಾದ ಪ್ರಕರಣಗಳನ್ನು ದಾಖಲಿಸಿ, ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.
ಮತ್ತೆ ಇಂತಹ ಘಟನೆ ಸಂಭವಿಸದಂತೆ ಸರ್ಕಾರ ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಂಘಟನೆಯ ಪದಾಧಿಕಾರಿಗಳಾದ ಆರ್ಯನ್, ಸುಧೀಂದ್ರ ಮಿಂಚು, ಮನೋಹರ್, ಸಂಜು, ಸಂತೋಷ್ ಹಾಗೂ ಇತರರು ಇದ್ದಾರೆ.