ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಇಲ್ಲಿನ ಜಿಲ್ಲಾ ಪತ್ರಕರ್ತ ಸಂಘದ ಕಚೇರಿಯನ್ನು ಮಂಗಳವಾರದಿಂದ 3 ದಿನಗಳ ಮಟ್ಟಿಗೆ ಸೀಲ್ಡೌನ್ ಮಾಡಲಾಗಿದೆ.
ಜುಲೈ 30ರಂದು ಸಿದ್ದರಾಮಯ್ಯ ಇಲ್ಲಿ ಮಾಧ್ಯಮ ಸಂವಾದ ನಡೆಸಿದ್ದರು. ಈ ವೇಳೆ ಭಾಗಿಯಾಗಿದ್ದ ಎಲ್ಲ ಪತ್ರಕರ್ತರ ಗಂಟಲುದ್ರವವನ್ನು ಆಗಸ್ಟ್ 5ರಂದು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಸಂಘದಲ್ಲಿ ಪೂರ್ವನಿಗದಿಯಾಗಿದ್ದ ಎಲ್ಲ ಸುದ್ದಿಗೋಷ್ಠಿಗಳನ್ನೂ ರದ್ದುಪಡಿಸಲಾಗಿದೆ.
ಸಿದ್ದರಾಮಯ್ಯ ಅವರ ಇಲ್ಲಿನ ನಿವಾಸವನ್ನೂ ಸೀಲ್ಡೌನ್ ಮಾಡಲಾಗಿದೆ. ಇವರ ನಿಕಟ ಸಂಪರ್ಕಕ್ಕೆ ಬಂದವರಿಗೆ ಪರೀಕ್ಷೆಗೆ ಒಳಗಾಗಲು ಸೂಚಿಸಲಾಗಿದೆ.