ಮೈಸೂರು: ಶಾಲೆ ತೆರೆಯುವ ಸಂಬಂಧ ಆತುರ ಬೇಡ. ಕೋವಿಡ್ನಿಂದಾಗಿ ಪರಿಸ್ಥಿತಿ ದಿನೇದಿನೇ ಉಲ್ಬಣಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬುಧವಾರ ಇಲ್ಲಿ ಎಚ್ಚರಿಕೆ ನೀಡಿದರು.
ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆ ಒಟ್ಟಿಗೆ ಸೇರಿ ಚರ್ಚಿಸಿ ಶಾಲೆ ತೆರೆಯುವ ಸಂಬಂಧ ನಿರ್ಧಾರ ತೆಗೆದುಕೊಳ್ಳಬೇಕಿದೆ. ಆರೋಗ್ಯ ಇಲಾಖೆ ಒಪ್ಪಿಗೆ ಪಡೆಯಲೇಬೇಕು. ಶಾಲೆ ತೆರೆಯಲು ಇದು ಸರಿಯಾದ ಸಮಯವಲ್ಲ; ಆದರೆ, ಕಾಲೇಜುಗಳನ್ನು ತೆರೆಯಲು ತೊಂದರೆ ಇಲ್ಲ ಎಂದರು.
ಅಧಿಕಾರಿಗಳಿಗಿಂತ ಮೊದಲು ಪೋಷಕರ ಮಾತಿಗೆ ಕಿವಿಗೊಡಬೇಕು. ಶಿಕ್ಷಕರು ಹಾಗೂ ಮಕ್ಕಳ ದನಿ ಆಲಿಸಬೇಕು ಎಂದುಸಲಹೆ ನೀಡಿದರು.
ತನ್ವೀರ್ ಟೀಕೆ: ಈಗಾಗಲೇ ಬಾರ್, ಥಿಯೇಟರ್, ದೇವಸ್ಥಾನ ಎಲ್ಲದಕ್ಕೂ ಕೇಂದ್ರ ಸರ್ಕಾರದವರು ಮಾರ್ಗಸೂಚಿ ನೀಡಿದ್ದಾರೆ. ಆದರೆ, ಶಾಲೆಗಳಿಗೆ ಮಾತ್ರ ರಾಜ್ಯ ಸರ್ಕಾರಗಳೇ ಮಾರ್ಗಸೂಚಿ ಸಿದ್ಧ ಪಡಿಸಿಕೊಳ್ಳಲಿ ಎಂದರೆ ಹೇಗೆ ಎಂದು ಶಾಸಕ ತನ್ವೀರ್ ಸೇಠ್ ಪ್ರಶ್ನಿಸಿದ್ದಾರೆ.
‘ಶೈಕ್ಷಣಿಕ ವ್ಯವಸ್ಥೆ ಪುನರಾರಂಭ ಆಗಬೇಕೆಂಬುದು ಸರಿ. ಆದರೆ, ಮಕ್ಕಳ ಆರೋಗ್ಯ ಎಲ್ಲದಕ್ಕಿಂತಲೂ ಮುಖ್ಯ. ಅಂತರ ಕಾಪಾಡುವಷ್ಟು ವಿಶಾಲವಾದ ಕೊಠಡಿಗಳು ಎಲ್ಲಿವೆ? ಶಾಲೆ ಆರಂಭಕ್ಕೂ ಮುನ್ನವೇ ಖಾಸಗಿ ಶಿಕ್ಷಣ ಸಂಸ್ಥೆಗಳು ವಸೂಲಿಗೆ ನಿಂತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಜ್ಞರೊಂದಿಗೆ ಚರ್ಚೆ: ಶಾಲೆ ಆರಂಭ ಸಂಬಂಧ ವೈದ್ಯರು, ಮಕ್ಕಳ ತಜ್ಞರ ಸಲಹೆ ಪಡೆದುಕೊಳ್ಳಲಾಗಿದೆ. ಪರಿಣತರ ಸಮಿತಿಯೊಂದಿಗೂ ಸಮಾಲೋಚನೆ ನಡೆಸಲಾಗಿದೆ. ಈ ಎಲ್ಲಾ ಅಂಶಗಳನ್ನು ಕ್ರೋಡೀಕರಿಸಿ ಒಂದು ವಾರದಲ್ಲಿ ಆರೋಗ್ಯ ಇಲಾಖೆಯಿಂದ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.