ಮೈಸೂರು: ಜಮೀನೊಂದರಲ್ಲಿ ಕೇರಳದಿಂದ ಕೆಲಸಗಾರರನ್ನು ಕರೆತಂದು ಕೆಲಸ ಮಾಡಿಸಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹರಡಿದ ನಂಜನಗೂಡು ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ ಜಯಶಂಕರ್ (21) ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈತ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಶುಂಠಿ ಬೇಸಾಯದ ಕೆಲಸಕ್ಕಾಗಿ ನೂರಾರು ಮಂದಿ ಕಾರ್ಮಿಕರನ್ನು ಕೇರಳದಿಂದ ಕರೆದುಕೊಂಡು ಬಂದಿದ್ದಾರೆ ಎಂದು ಸುಳ್ಳುಸುದ್ದಿಯನ್ನು ಹಬ್ಬಿಸಿದ್ದ. ನಂತರ, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಕೇರಳದಿಂದ ಕಾರ್ಮಿಕರು ಬಂದಿರಲಿಲ್ಲ ಎಂಬುದು ಗೊತ್ತಾಯಿತು.
ಸುಳ್ಳು ಸುದ್ದಿ ಹಬ್ಬಿಸಿದ ಜಯಶಂಕರ್ ವಿರುದ್ಧ ಐಪಿಸಿ ಸೆಕ್ಷನ್ 505 (ಸಾರ್ವಜನಿಕರಲ್ಲಿ ಭೀತಿ ಅಥವಾ ಆತಂಕಕ್ಕೆ ಕಾರಣವಾಗಬಲ್ಲ ವಿಷಯಗಳು/ಗಾಳಿ ಸುದ್ದಿ ಹಬ್ಬುವುದು) ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ ಕಾಲಂ 54ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.