ಮೈಸೂರು: ಅಶೋಕ ಎಫ್ಸಿ ತಂಡದವರು ‘ಅಚ್ಯುತರಾವ್ ಸ್ಮಾರಕ’ ಟ್ರೋಫಿಗಾಗಿ ನಡೆದ ಮೈಸೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ (ಎಂಡಿಎಫ್ಎ) ಆಶ್ರಯದ ‘ಎ’ ಡಿವಿಷನ್ ಲೀಗ್ ಚಾಂಪಿಯನ್ಷಿಪ್ನಲ್ಲಿ ಕಿರೀಟ ಮುಡಿಗೇರಿಸಿಕೊಂಡರು.
ಮೈಸೂರು ವಿ.ವಿ. ಫುಟ್ಬಾಲ್ ಮೈದಾನದಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ಅಶೋಕ ಎಫ್ಸಿ ತಂಡ ಅಜೇಯ ಸಾಧನೆಯೊಂದಿಗೆ ಒಟ್ಟು 20 ಪಾಯಿಂಟ್ಗಳೊಂದಿಗೆ ಅಗ್ರಸ್ಥಾನ ತನ್ನದಾಗಿಸಿಕೊಂಡಿತು. ಆರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಈ ತಂಡ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿತು.
ಎಂಟು ಪಂದ್ಯಗಳಿಂದ 17 ಪಾಯಿಂಟ್ ಕಲೆಹಾಕಿದ ಚಾಣಕ್ಯಕೂಟ ಎಫ್ಸಿ ತಂಡ ‘ರನ್ನರ್ ಅಪ್’ ಸ್ಥಾನ ಗಳಿಸಿತು. ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ತಂಡ ಎರಡರಲ್ಲಿ ಡ್ರಾ ಮಾಡಿಕೊಂಡಿತು. ಒಂದು ಪಂದ್ಯದಲ್ಲಿ ಸೋಲು ಅನುಭವಿಸಿದೆ.
ಕಾಸ್ಮೋಸ್ ಎಫ್ಸಿ, ಗಾಂಧಿನಗರ ಎಫ್ಸಿ ಮತ್ತು ಟೌನ್ ಸ್ಪೋರ್ಟ್ಸ್ ಎಫ್ಸಿ ತಂಡಗಳು ಕ್ರಮವಾಗಿ ಮೂರರಿಂದ ಐದರವರೆಗಿನ ಸ್ಥಾನಗಳನ್ನು ಪಡೆದುಕೊಂಡವು.
ಪ್ರಶಸ್ತಿ ಪ್ರದಾನ: ಮಂಗಳವಾರ ಸಂಜೆ ನಡೆದ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಪ್ರೊ.ಶೇಷಣ್ಣ, ಮೋಹನ್ ಕುಮಾರ್, ಪ್ರೊ.ಶ್ರೀಕಂಠಸ್ವಾಮಿ, ಎಂಡಿಎಫ್ಎ ಅಧ್ಯಕ್ಷ ಕೆ.ಜಿ.ಸುಬ್ರಮಣ್ಯಸ್ವಾಮಿ, ಕಾರ್ಯದರ್ಶಿ ಎಲ್.ಮಂಜುನಾಥ್ ಪಾಲ್ಗೊಂಡಿದ್ದರು.