ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಜಿಲ್ಲೆಯಲ್ಲಿ ಇಸ್ರೇಲ್ ಕೃಷಿ ಪ್ರಯೋಗ

ಏತ ಹನಿ ನೀರಾವರಿ ಪದ್ಧತಿಯಲ್ಲಿ ಹಲವು ಬೆಳೆ ಬೆಳೆದ ರೈತರು; ಮೂರು ಕಿ.ಮೀ.ವರೆಗೆ ಯೋಜನೆಯ ವ್ಯಾಪ್ತಿ
Last Updated 11 ನವೆಂಬರ್ 2020, 5:14 IST
ಅಕ್ಷರ ಗಾತ್ರ

ವರುಣಾ: ಕಪಿಲಾ ನದಿ ನಂದಿಗುಂದ ಏತ ಹನಿ ನೀರಾವರಿ ಯೋಜನೆಯು 303 ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುತ್ತಿದ್ದು, ಇಸ್ರೇಲ್ ಮಾದರಿ ಪದ್ಧತಿಯಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ.

ಮೈಸೂರು ಜಿಲ್ಲೆಯಲ್ಲಿಯೇ ಇದು ಪ್ರಥಮ ಪ್ರಯೋಗವಾಗಿದ್ದು, 2017ರಲ್ಲಿ ₹15 ಕೋಟಿ ವೆಚ್ಚದಲ್ಲಿ ಸರ್ಕಾರ ಕಾಮಗಾರಿ ಆರಂಭಿಸಿತ್ತು, ಆರು ತಿಂಗಳ ಹಿಂದೆ ಯೋಜನೆ ಪೂರ್ಣಗೊಂಡಿದ್ದು, ಇದೀಗ ಜಮೀನಿಗೆ ನೀರು ಪೂರೈಕೆಯಾಗಿ ರೈತರು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ವರುಣಾ ನಾಲೆಯ ಕೊನೆಯ ಭಾಗದ ಜಮೀನಿಗೆ ನೀರು ಸಿಗದೆ ಒದ್ದಾಡುತ್ತಿದ್ದ ರೈತರಿಗೆ, ಹನಿ ನೀರಾವರಿ ವರದಾನವಾಗಿದೆ.

ನಂದಿಗುಂದ, ನಂದಿಗುಂದಪುರ, ತುಂನೇರಳೆ ಹೊಸಕೋಟೆ ಹಾಗೂ ಎಡಕೊಳ ಭಾಗದ ಖುಷ್ಕಿ ಭೂಮಿ ಖಾರಿಫ್ (ಮಳೆಗಾಲದ) ಬೆಳೆಗೆ ಡ್ರಿಪ್ ಮೂಲಕ ಏತ ನೀರಾವರಿ ಭೂಮಿಯ ಒಳಗಡೆ ಲೈನ್ ಹಾಕಲಾಗಿದೆ. ಈ ಯೋಜನೆಯು ಸುಮಾರು ಮೂರು ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ವರ್ಷದಲ್ಲಿ ನೀರಿನ ಲಭ್ಯತೆ ನೋಡಿ ಒಂಬತ್ತು ತಿಂಗಳು ಮಾತ್ರ ನೀರಿನ ಸರಬರಾಜು ಇರುತ್ತದೆ.

ಇದು ಪೈಲಟ್ ಯೋಜನೆಯಾಗಿದ್ದು, ಯಶಸ್ಸು ಕಂಡಲ್ಲಿ ವಿವಿಧ ಭಾಗಗಳಿಗೆ ವಿಸ್ತರಣೆಯಾಗಲಿದೆ. ಸೆ.15ರ ನಂತರ ಪ್ರಾಯೋಗಿಕವಾಗಿ ರೈತರಿಗೆ ನೀರು ಹರಿಸಲು ಆರಂಭಿಸಲಾಗಿದೆ.

‘ರೈತರು ಇಲ್ಲಿರುವ ಯಾವುದೇ ಪೈಪ್‌ಲೈನ್ ಇಲ್ಲವೆ ಯಂತ್ರಗಳನ್ನು ಹಾಳಾಗದಂತೆ ರಕ್ಷಣೆ ಮಾಡಿಕೊಳ್ಳಬೇಕು’ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಕಾರ್ಯ ಪಾಲಕ ಎಂಜಿನಿಯರ್ ರಘುಪತಿ.

‘ಇಲ್ಲಿ ಬಳಸಿರುವ ತಂತ್ರಜ್ಞಾನ, ನೀರಿನ ರಕ್ಷಣೆ, ನೀರಿನ ಸರಬರಾಜು, ಬಳಕೆ ಎಲ್ಲವೂ ನೂತನ ಪ್ರಯೋಗವಾಗಿದೆ’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಪ್ರಸಾದ್ ಮಾಹಿತಿ ನೀಡಿದರು.

‘ಹನಿ ನೀರಾವರಿ ಮೂಲಕ ರಾಗಿ, ಕಬ್ಬು, ತರಕಾರಿ, ಬಾಳೆ ಇನ್ನಿತರೆ ಬೆಳೆಗಳನ್ನು ಬೆಳೆಯಲು ಅವಕಾಶವಿದೆ’ ಎಂದು ಕಾವೇರಿ ನೀರಾವರಿ ನಿಗಮದ ಶಾಖಾಧಿಕಾರಿ ಸತೀಶ್ ಹೇಳುತ್ತಾರೆ.

‘ಇದೊಂದು ಸವಾಲಿನ ಯೋಜನೆಯಾಗಿತ್ತು. ಜನರಿಗೆ ನೀರು ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎನ್ನುತ್ತಾರೆ ಚೈತ್ರಾ ಸಿವಿಲ್ ವೆಂಚ್ಯೂರ್ಸ್‌ ಎಲ್‌ಎಲ್‌ಬಿ ಕಂಪನಿ ಪ್ರಾಜೆಕ್ಟ್‌ ಎಂಜಿನಿಯರ್ ಗಣೇಶ್.

‘ಒಂದು ಆಟೊ ಕೇಂದ್ರದಿಂದ ದಿನಕ್ಕೆ ಎರಡು ಗಂಟೆ ನೀರು ಬಿಡಲಾಗುತ್ತದೆ. ಇದು ಸುಮಾರು 3 ಎಕರೆ ಪ್ರದೇಶಕ್ಕೆ ಸಾಕಾಗುತ್ತದೆ’ ಎನ್ನುತ್ತಾರೆ ಮೇಲ್ವಿಚಾರಕ ನಾಗರಾಜ.

ಏತ ನೀರಾವರಿ ಸಂಗ್ರಹ ಕೇಂದ್ರದ ಭಾಗದಲ್ಲಿ ಒಂದು ಚಿಕ್ಕ ಚೆಕ್ ಡ್ಯಾಂ ನಿರ್ಮಾಣವಾದರೆ ಬೇಸಿಗೆಯಲ್ಲಿ ರೈತರಿಗೆ ನೀರು ಪೂರೈಸಲು ಹೆಚ್ಚಿನ ಅವಕಾಶವಾಗುತ್ತದೆ ಎನ್ನುತ್ತಾರೆ ನಿವೃತ್ತ ಎಂಜಿನಿಯರ್ ನಂದಿಗುಂದಪುರದ ಶಿವಸ್ವಾಮಿ.

ನೂತನ ತಂತ್ರಜ್ಞಾನ ಬಳಕೆ: ಮೊಬೈಲ್ ಇಲ್ಲವೆ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂ ಮೂಲಕ ರೈತರ ಜಮೀನಿಗೆ ನೀರು ಹರಿಸಲಾಗುತ್ತದೆ. ನದಿ ದಡದಲ್ಲಿರುವ ಏತ ನೀರಾವರಿ ಕೇಂದ್ರದಿಂದ ಮೂರು ಮುಖ್ಯ ಕೊಳವೆಗಳ ಮೂಲಕ 25 ದೊಡ್ಡ ಕಂಟ್ರೋಲ್ ವಾಲ್‌ಗಳಿಗೆ ತಲುಪುತ್ತದೆ. ನಂತರ 303 ಆಟೊ ಸಿಸ್ಟಂ ಮೆಷಿನ್‌ಗಳಿಂದ ಜಮೀನಿಗೆ ಡ್ರಿಪ್‌ನಿಂದ ನೀರು ತಲುಪುತ್ತದೆ.

ಇದಲ್ಲದೆ ಕೊಳೆ ನೀರು ಶುದ್ಧೀಕರಿಸಲು ಏಳು ಫಿಲ್ಟರ್ ಯಂತ್ರಗಳಿವೆ. ಪ್ರತಿ ಆಟೊ ಸಿಸ್ಟಂ ಚಾಲನೆಗೆ ಸೋಲಾರ್ ಸಂಪರ್ಕ ಕಲ್ಪಿಸಲಾಗಿದೆ. ಇದನ್ನು ಜಗತ್ತಿನ ಯಾವುದೇ ಪ್ರದೇಶದಿಂದ ಮೊಬೈಲ್ ಮೂಲಕ ನಿಯಂತ್ರಣ ಮಾಡಿ ನೀರು ಪೂರೈಕೆ ಇಲ್ಲವೇ ಸ್ಥಗಿತಗೊಳಿಸಲು ಅವಕಾಶವಿದೆ. ನೀರು ಅಗತ್ಯವಿಲ್ಲದ ರೈತರು ಜಮೀನಿನಲ್ಲಿ ಚಿಕ್ಕ
ಕ್ಯಾಪ್ ಹಾಕುವ ವ್ಯವಸ್ಥೆ ಕೂಡ ಮಾಡಲಾಗಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ವರುಣಾ ಬಳಿಯ ಕಪಿಲಾ ನದಿ ತೀರದ ಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಹನಿ ನೀರಾವರಿ ಬಳಕೆದಾರ ರೈತರಿಗೆ ನೀರು ಬಳಸುವ ಹಾಗೂ ಬೆಳೆ ಬಗ್ಗೆ ಈಗಾಗಲೇ ಸಭೆ ಕೂಡ ನಡೆಸಲಾಗಿದೆ. ಇದರಲ್ಲಿ ನೂರಾರು ರೈತರು ತರಬೇತಿ ‍ಪಡೆದಿದ್ದಾರೆ.

‘ವರುಣಾ ಕಾಲುವೆ ನೀರು ಕೊನೆಯ ಭಾಗದ ರೈತರಿಗೆ ತಲುಪುತ್ತಿರಲಿಲ್ಲ, ಏತ ಹನಿ ನೀರಾವರಿ ಯೋಜನೆಯಿಂದಾಗಿ ಮೀಟರ್ ಬಿನ್ಸ್ ಬೆಳೆ ಕೈಗೆ ಬಂದಿದೆ. ಇದು ನನ್ನಂಥ ಸಾವಿರಾರು ರೈತರಿಗೆ ಅನುಕೂಲವಾಗಲಿದೆ’ ಎಂದು ನಂದಿಗುಂದ ಗ್ರಾಮದ ರೈತ ಹರೀಶ್ ಹರ್ಷ ವ್ಯಕ್ತಪಡಿಸುತ್ತಾರೆ.

***

ಇದೊಂದು ಮೈಸೂರು ಜಿಲ್ಲೆ ಹಾಗೂ ದಕ್ಷಿಣ ಕರ್ನಾಟಕದ ಮಹತ್ವದ ಏತ ಹನಿ ನೀರಾವರಿ ಯೋಜನೆ, ರೈತರು ಸದುಪಯೋಗಪಡಿಸಿಕೊಳ್ಳಬೇಕು.

-ರಘುಪತಿ, ಕಾರ್ಯಪಾಲಕ ಎಂಜಿನಿಯರ್, ಕಾವೇರಿ ನೀರಾವರಿ ನಿಗಮ

***

ವರುಣಾ ಕ್ಷೇತ್ರದಲ್ಲಿ ಈ ಯೋಜನೆ ರೈತರ ಆರ್ಥಿಕತೆ ವೃದ್ಧಿಗೆ ಸಹಾಯಕವಾಗಲಿದೆ.

-ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ ವರುಣಾ ಕ್ಷೇತ್ರ

***

ಹನಿ ನೀರಾವರಿಯ ಈ ಯೋಜನೆ ಉತ್ತಮವಾಗಿದ್ದು ಬೇಸಿಗೆಯಲ್ಲಿ ಕೊಳವೆಬಾವಿಗಳು ವಿಫಲವಾಗುವುದರಿಂದ ಈ ಸಮಯದಲ್ಲಿ ನೀರಿನ ಪೂರೈಕೆ ಅಗತ್ಯವಾಗಿತ್ತು.

-ಗುರುಮಲ್ಲೇಶ್, ತುಂನೇರಳೆ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT