ಮೈಸೂರು: ಸಾಹಿತ್ಯ ವಿಮರ್ಶೆ ಈಗಾಗಲೇ ಹಳಿ ತಪ್ಪಿದೆ ಎಂದು ಮೈಸೂರು ವಿ.ವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಡಿ.ಎ.ಶಂಕರ್ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರವು ಬುಧವಾರ ಇಲ್ಲಿ ಏರ್ಪಡಿಸಿದ್ದ ‘ಅಡಿಗರ ಕಾವ್ಯ: ಅನುಸಂಧಾನ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮದೇ ಆದ ಧೋರಣೆಯಲ್ಲಿ, ರಾಜಕೀಯ ಸಿದ್ಧಾಂತದಡಿಯಲ್ಲಿ ವಿಮರ್ಶೆ ನಡೆಸುವುದು ಒಂದು ರೀತಿಯಲ್ಲಿ ‘ಸೂಸೈಡ್’ ಎಂದು ವ್ಯಾಖ್ಯಾನಿಸಿದ ಅವರು, ಈಗ ವಿಮರ್ಶಕರೇ ಇಲ್ಲ. ಏನಿದ್ದರೂ ಇದು ಚಿಂತಕರು, ಸಂಸ್ಕೃತಿ ಚಿಂತಕರ ಕಾಲ ಎಂದು ಹರಿಹಾಯ್ದರು.
ಕಾವ್ಯವೇ ಇಲ್ಲದೇ ತಮ್ಮದೇ ಭ್ರಮಾತ್ಮಕ ಪ್ರಪಂಚದಲ್ಲಿ ಮೌಲ್ಯವೊಂದನ್ನು ಸೃಷ್ಟಿಸಿಕೊಂಡು ವಿಮರ್ಶೆ ಮಾಡುವುದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ಟೀಕಿಸಿದರು.
ವಿಮರ್ಶೆಯು ಯಾವಾಗಲೂ ಕಾವ್ಯದಲ್ಲಿರುವ ಒಳನೋಟಗಳನ್ನು ಹೇಳುವಂತಿರಬೇಕು, ಭಾಷೆ ಪೆಡುಸಾಗಿರಬಾರದು, ಶಿಕ್ಷಿತನಲ್ಲದ ಓದುಗನಿಗೂ, ಸೃಜನಶೀಲ ಕ್ರಿಯೆಯಲ್ಲಿ ಆಗತಾನೆ ತೊಡಗಿದವರಿಗೂ ಅರ್ಥವಾಗುವಂತಿಬೇಕು ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಮಾತನಾಡಿ, ‘ಅಕಾಡೆಮಿಯ ಅಧ್ಯಕ್ಷನಾದ ಮೇಲೆ ನಾನೆಷ್ಟು ಸಣ್ಣವನು ಎಂಬುದು ಗೊತ್ತಾಯಿತು. ದೊಡ್ಡವನಾಗುವ ಪ್ರಯತ್ನವನ್ನು ನಡೆಸುತ್ತೇನೆ’ ಎಂದು ಹೇಳಿದರು.