ಮೈಸೂರು: ಕೇವಲ ಜೆಡಿಎಸ್ಗಷ್ಟೆ ಕುಮಾರಸ್ವಾಮಿ ಸಿ.ಎಂ ಅಲ್ಲ. ಅವರು ಗ್ರಾಮ ವಾಸ್ತವ್ಯದ ಮೂಲಕ ಮಾಡುವ ಒಳ್ಳೆಯ ಕೆಲಸಗಳ ಕ್ರೆಡಿಟ್ ಸಮ್ಮಿಶ್ರ ಸರ್ಕಾರಕ್ಕೆ ಸಿಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ಇಲ್ಲಿ ಸುತ್ತೂರಿನಲ್ಲಿ ಸೈನ್ಸ್ ಪಾರ್ಕ್ ನಿರ್ಮಾಣ ಕುರಿತ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ವಿರೋಧ ಪಕ್ಷದವರು ಎಲ್ಲವನ್ನು ಟೀಕೆ ಮಾಡುತ್ತಾರೆ. ಗ್ರಾಮವಾಸ್ತವ್ಯವನ್ನೂ ಟೀಕೆ ಮಾಡಲಾಗುತ್ತಿದೆ. ಸರ್ಕಾರದ ಆಡಳಿತವನ್ನು ಜನಸಮುದಾಯದ ಬಳಿಗೆ ಕೊಂಡಯ್ಯಬೇಕು ಎಂಬುದು ಗ್ರಾಮವಾಸ್ತವ್ಯದ ಉದ್ದೇಶ ಎಂದು ಅವರು ಹೇಳಿದರು.
ಒಬ್ಬ ಸಿಎಂ ಗ್ರಾಮಕ್ಕೆ ಬರುತ್ತಾರೆ ಎಂದರೇ ಆ ಊರಿನ ರಸ್ತೆ, ಶಾಲೆ, ಮೂಲ ಸೌಕರ್ಯಗಳ ಅಭಿವೃದ್ಧಿ ಆಗುತ್ತದೆ. ಇದರಿಂದ ಆ ಸುತ್ತಲಿನ ಗ್ರಾಮಗಳು ಅಭಿವೃದ್ಧಿ ಆಗುತ್ತವೆ. ಇದನ್ನ ಪ್ರತಿಪಕ್ಷ ಅರ್ಥ ಮಾಡಿಕೊಳ್ಳಬೇಕು. ಎಲ್ಲ ವಿಷಯದಲ್ಲೂ ರಾಜಕೀಯ ಮಾಡಬಾರದು ಎಂದು ಅವರು ಹೇಳಿದರು.
ನಾನು ಕೂಡ ಗ್ರಾಮವಾಸ್ತವ್ಯ ಮಾಡಲಿದ್ದು, ನಂತರ ದಿನಾಂಕ ನಿಗದಿಸಿ ಪ್ರಕಟಿಸುತ್ತೇನೆ ಎಂದು ತಿಳಿಸಿದರು.
ಮಧ್ಯಂತರ ಚುನಾವಣೆ ನಡೆಯುವುದಿಲ್ಲ ಎಂದು ನನಗನಿಸುತ್ತದೆ. ಆ ಮೈತ್ರಿ ಪಕ್ಷದ ನಾಯಕರಲ್ಲಿ ಯಾರೆ ವೈಯಕ್ತಿಕ ಹೇಳಿಕೆ ನೀಡಿದರು ಅದು ಬರೀ ಅವರ ಅಭಿಪ್ರಾಯ ಅಷ್ಟೆ . ಪಕ್ಷಗಳ ವರಿಷ್ಠರ ನಿರ್ಧಾರವೇ ಅಂತಿಮ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಮೈಸೂರಿನಲ್ಲಿ ಸೈನ್ಸ್ ಸಿಟಿ ನಿರ್ಮಿಸಲು ಜೆಎಸ್ಎಸ್ ಮಠದ ವತಿಯಿಂದ25 ಎಕರೆ ಜಮೀನು ನೀಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ₹200ಕೋಟಿ ವೆಚ್ಚದಲ್ಲಿ ಸೈನ್ಸ್ ಸಿಟಿ ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.