ಮೈಸೂರು: ಕರ್ನಾಟಕ ಪ್ರದೇಶ ಕುರುಬರ ಸಂಘದ 2019-2024ನೇ ಸಾಲಿನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಹಾಲಿ ನಿರ್ದೇಶಕರೂ ಸ್ಪರ್ಧಿಸಿದ್ದು, ಮತ ನೀಡಿ ಎಂದು ಮನವಿ ಮಾಡಿಕೊಂಡರು.
ಅಭ್ಯರ್ಥಿಗಳಾದ ಬಿ.ಸುಬ್ರಹ್ಮಣ್ಯ, ಜೆ.ಗೋಪಿ, ರೇಖಾ ಪ್ರಿಯದರ್ಶಿನಿ, ಯು.ಅಭಿಲಾಷ್, ಆರ್.ನಾಗರಾಜು, ಕೆ.ಮಾದೇಗೌಡ ಹಾಲಿ ನಿರ್ದೇಶಕರಿದ್ದು, ಮತ್ತೊಂದು ಬಾರಿ ಅವಕಾಶ ಕೊಡಿ ಎಂದು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೋರಿದರು.
‘ಹಿಂದಿನ ಸಾಲಿನಲ್ಲಿ ಆಯ್ಕೆಯಾಗಿದ್ದ ನಾವು ನೆನಪುಳಿಯುವ ಹಲ ಕೆಲಸಗಳನ್ನು ಮಾಡಿದ್ದೇವೆ. ನಗರದಲ್ಲಿ ₹ 25 ಕೋಟಿ ವೆಚ್ಚದಲ್ಲಿ ಕನಕ ಎಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಬಹಳಷ್ಟು ಶ್ರಮಿಸಿದ್ದು, ಮುಂದಿನ ವರ್ಷದಲ್ಲಿ ಕಾಲೇಜು ಆರಂಭವಾಗಲಿದೆ. ಸಮಾಜದ ಸಾಮಾಜಿಕ ಬೆಳವಣಿಗೆಗಾಗಿ ಸಂಘಕ್ಕೆ ಒಂದು ಕಟ್ಟಡ ನಿರ್ಮಿಸಲು ಮುಡಾದಿಂದ 27 ಗುಂಟೆ ಸಿ.ಎ.ನಿವೇಶವನ್ನು ವಸಂತನಗರದಲ್ಲಿ ಪಡೆದುಕೊಂಡಿದ್ದೇವೆ’ ಎಂದು ಹೇಳಿದರು.