ಮೈಸೂರು: ಕಾನೂನು ಮತ್ತು ಸುವ್ಯವಸ್ಥೆ ಮೈಸೂರಿನಲ್ಲಿ ಸಂಪೂರ್ಣ ಕುಸಿದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಕೊಲೆ, ಸುಲಿಗೆ, ಕಳ್ಳತನ, ದರೋಡೆ, ಅತ್ಯಾಚಾರಗಳಂತಹ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಅದರಲ್ಲೂ ಸಾಮೂಹಿಕ ಅತ್ಯಾಚಾರದಂತಹ ಹೇಯ ಕೃತ್ಯ ನಡೆದು, ಮೈಸೂರಿಗೆ ಕಪ್ಪು ಚುಕ್ಕೆ ಬಂದಿದೆ. ಹೀಗಿದ್ದರೂ, ಸರ್ಕಾರ ಪೊಲೀಸರಿಗೆ ಚಾಟಿ ಬೀಸದೇ ಬೆನ್ನು ತಟ್ಟುತ್ತಿದೆ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಒಂದು ವೇಳೆ ಸರ್ಕಾರ ಎಚ್ಚೆತ್ತುಕೊಳ್ಳದೇ ಇದ್ದಲ್ಲಿ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸುವುದು ನಿಶ್ಚಿತ. ವಿವಿಧ ತನಿಖಾ ಸಂಸ್ಥೆಗಳಿಂದ ಉನ್ನತ ಮಟ್ಟದ ತನಿಖೆ ನಡೆಸಲು ಆಗ್ರಹಿಸುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದರು.
ಶಾಸಕ ಜಿ.ಟಿ.ದೇವೇಗೌಡ ಹಾಗೂ ಅವರ ಪುತ್ರ ಇಬ್ಬರಿಗೂ ಟಿಕೆಟ್ ನೀಡುತ್ತೇವೆ ಎಂದು ಹೇಳಿಲ್ಲ. ಟಿಕೆಟ್ ವಿಷಯವನ್ನು ಹೈಕಮಾಂಡ್ನ್ನು ಕೇಳುವಂತೆ ಹೇಳಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ಅಡುಗೆ ಅನಿಲದ ದರವು ₹ 414 ಇತ್ತು. ಈಗ ₹ 886ಕ್ಕೆ ಹೆಚ್ಚಿದೆ. ಪ್ರಧಾನಿ ಮೋದಿ ಅವರು ಹೇಳಿದ ಅಚ್ಚೇ ದಿನ್ ಇದೆ ಎಂದು ವ್ಯಂಗ್ಯವಾಡಿದರು.
‘ಜಾತಿಗಣತಿ ವರದಿ ನಾನು ಮುಖ್ಯಮಂತ್ರಿಯಾಗಿದ್ದಾಗ ರೂಪುಗೊಂಡಿರಲೇ ಇಲ್ಲ. ಹಾಗಾಗಿ, ಅದನ್ನು ಬಿಡುಗಡೆ ಮಾಡಲಿಲ್ಲ ಎಂಬ ಹಾಗೂ ಅದನ್ನು ಸೋರಿಕೆ ಮಾಡಿದೆ ಎಂಬ ಆರೋಪಗಳು ಬಾಲಿಶವಾದದ್ದು’ ಎಂದರು.
ಶಾಸಕ ತನ್ವೀರ್ ಸೇಠ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಕೆಪಿಸಿಸಿ ವಕ್ತರರಾದ ಎಂ.ಲಕ್ಷ್ಮಣ್, ಎಚ್.ಎ.ವೆಂಕಟೇಶ್, ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಡಾ.ಎಚ್.ಸಿ.ಮಹದೇವಪ್ಪ, ಎಂ.ಕೆ.ಸೋಮಶೇಖರ್ ಇದ್ದರು.
ಪೊಲೀಸರಿಗೆ ತರಾಟೆ: ಸಿದ್ದರಾಮಯ್ಯ ಅವರು ಇಲ್ಲಿನ ಜಲದರ್ಶಿನಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾಹಿತಿ ಪಡೆದುಕೊಂಡರು.
ಈ ವೇಳೆ ಅವರು ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಆರೋಪಿಗಳನ್ನು ಬಂಧಿಸುವುದು ದೊಡ್ಡದ್ದಲ್ಲ. ಅಪರಾಧಗಳು ನಡೆಯದಂತೆ ಎಚ್ಚರವಹಿಸುವುದು ದೊಡ್ಡದು ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.