ಮೈಸೂರು: ಸತತ ಮಳೆಯಿಂದಾಗಿ ಮೈಸೂರಿನ ಅಂಬಾವಿಲಾಸ ಅರಮನೆಯ ಚಾವಣಿ ಸೋರುತ್ತಿದ್ದು, ಕೆಲವೆಡೆ ಪ್ಲಾಸ್ಟರಿಂಗ್ ಕಿತ್ತು ಬಂದಿದೆ. ಗೋಡೆಗಳು ತೇವಗೊಂಡಿವೆ.
ಅರಮನೆಯ ಚಾವಣಿಯ ಕೆಲವೆಡೆ ಈ ಹಿಂದೆಯೂ ಸೋರಿಕೆ ಕಂಡುಬಂದಿತ್ತು. ಸಕಾಲಕ್ಕೆ ದುರಸ್ತಿ ಕಾರ್ಯ ಕೈಗೊಂಡು ಸರಿಪಡಿಸಲಾಗಿತ್ತು. ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ಮತ್ತೆ ಸೋರಿಕೆ ಉಂಟಾಗಿದೆ.
‘ರಾಜವಂಶಸ್ಥರು ವಾಸಿಸುತ್ತಿರುವ ಭಾಗದಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸೋರಿಕೆ ಆಗುತ್ತಿದೆ. ಅರಮನೆಯ ನಿರ್ವಹಣೆಗೆ ಸರ್ಕಾರ ಆಸಕ್ತಿ ತೋರದೇ ಇರುವುದಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ ಹೊರ ಹಾಕಿದ್ದಾರೆ’ ಎಂದು ಅರಮನೆ ಮೂಲಗಳು ತಿಳಿಸಿವೆ.
‘ಅರಮನೆ ಮಂಡಳಿಯ ಸುಪ ರ್ದಿಗೆ ಬರುವ ಸ್ಥಳದಲ್ಲಿ ಮಳೆಯಿಂದಾಗಿ ಯಾವುದೇ ಹಾನಿ ಉಂಟಾಗಿಲ್ಲ. ಚಾವಣಿ ಸೋರಿಕೆ ಉಂಟಾಗಿಲ್ಲ’ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.