ಹುಣಸೂರು: ವಿದ್ಯುತ್ ಪ್ರಸರಣ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರವನ್ನು ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ವಿರೋಧಿಸುತ್ತದೆ ಎಂದು ಕೆಪಿಟಿಸಿಎಲ್ ಡಿಪ್ಲೊಮಾ ಎಂಜಿನಿಯರ್ ಸಂಘದ ಅಧ್ಯಕ್ಷ ಚೆನ್ನಕೇಶವ್ ಹೇಳಿದರು.
ನಗರದ ಸೆಸ್ಕ್ ಉಪವಿಭಾಗಾಧಿಕಾರಿ ಕಚೇರಿ ಎದುರು ಸಿಬ್ಬಂದಿ ಕಪ್ಪುಪಟ್ಟಿ ತೊಟ್ಟು ಪ್ರತಿಭಟನೆಯಲ್ಲಿ ಮಾತನಾಡಿ, ‘ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಖಾಸಗೀಕರಣ ನೀತಿಯಿಂದ ವಿದ್ಯುತ್ ಪ್ರಸರಣ ನೌಕರರು, ಕೃಷಿಕರು ಮತ್ತು ಗ್ರಾಹಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ’ ಎಂದರು.
‘2020 ಪ್ರಸ್ತಾವಿತ ತಿದ್ದುಪಡಿ ವಿದ್ಯುತ್ ಕಾಯ್ದೆ ಮೂರು ಕ್ಷೇತ್ರಕ್ಕೂ ಮಾರಕವಾಗಿದ್ದು, ಇಲಾಖೆ ಸಿಬ್ಬಂದಿ ಬೀದಿಗೆ ಬೀಳಲಿದೆ. ನಂತರದಲ್ಲಿ ಕೃಷಿ ಕ್ಷೇತ್ರಕ್ಕೆ ನೀಡುತ್ತಿರುವ ಉಚಿತ ವಿದ್ಯುತ್ ಸ್ಥಗಿತಗೊಳ್ಳಲಿದೆ ಮತ್ತು ಸಾಮಾನ್ಯ ಗ್ರಾಹಕರು ಅತಿ ಹೆಚ್ಚು ದರ ಪಾವತಿಸಿ ವಿದ್ಯುತ್ ಖರೀದಿಸಬೇಕಾಗಲಿದೆ’ ಎಂದರು.
‘2004ರಲ್ಲಿ ಕೇಂದ್ರ ವಿದ್ಯುತ್ ಪ್ರಸರಣಾ ವಿಭಾಗ ಮಂಡಿಸಿದ್ದ ವಿತರಣಾ ನಷ್ಟ ಶೇ 32ರಷ್ಟಿದ್ದು, ಈ ನಷ್ಟವನ್ನು ತಗ್ಗಿಸಿ ಈಗ ಶೇ 15ಕ್ಕೆ ಇಳಿಸಲಾಗಿದೆ. ಹೀಗಿದ್ದರೂ ಖಾಸಗೀಕರಣ ಮಾಡುವ ಪ್ರಸ್ತಾವವನ್ನು ಸರ್ಕಾರ ಕೈ ಬಿಟ್ಟಿಲ್ಲ’ ಎಂದರು.
‘ಖಾಸಗೀಕರಣದಿಂದ ವಿದ್ಯುತ್ ನಿಗಮ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮೂಲಸೌಲಭ್ಯ ವಂಚಿತರಾಗಲಿದ್ದಾರೆ. ಖಾಸಗಿ ಕಂಪನಿಗಳು ಸಿಬ್ಬಂದಿ ಯೋಗಕ್ಷೇಮ ನೋಡದೆ ಲಾಭಾಂಶಗಳಿಸಲು ಆದ್ಯತೆ ನೀಡಲಿದೆ’ ಎಂದರು.
ಪ್ರತಿಭಟನೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮಂಡಳಿ ಎಂಜಿನಿಯರಿಂಗ್ ವಿಭಾಗ ಸಮಿತಿ ಸದಸ್ಯ ಸುನಿಲ್, ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್, ಎಸ್ಸಿ ಮತ್ತು ಎಸ್ಟಿ ಸೆಲ್ ಕಲ್ಯಾಣ ಸಂಘದ ಜಿ.ಸುರೇಶ್, ಲೆಕ್ಕಾಧಿಕಾರಿಗಳ ಸಂಘದ ಪರಮೇಶ್ ಸೇರಿದಂತೆ ಉಪವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು.