ಮೈಸೂರು: ತಾಲ್ಲೂಕಿನ ನಾಗನಹಳ್ಳಿಯ ರೈತ ತರಬೇತಿ ಕೇಂದ್ರದ ಸಮೀಪ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಈ ಕೇಂದ್ರವು ಕೃಷಿ ವಿಶ್ವವಿದ್ಯಾಲಯದ ಒಂದು ಸಂಸ್ಥೆಯಾಗಿದ್ದು, ಐತಿಹಾಸಿಕ ಮಹತ್ವ ಹೊಂದಿದೆ. ಇದರ ಸಮೀಪದಲ್ಲಿ ಮದ್ಯದಂಗಡಿ ತೆರೆಯುವುದು ಸರಿಯಲ್ಲ ಎಂದು ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.
ಇಲ್ಲಿಗೆ ರೈತರು ಮಾತ್ರವೇ ತರಬೇತಿಗೆ ಬರುವುದಿಲ್ಲ. ಇಲ್ಲಿರುವ ಫಾರಂನ್ನು ವೀಕ್ಷಿಸಲು ಇತರೆ ರಾಜ್ಯಗಳಿಂದಲೂ ವಿಜ್ಞಾನಿಗಳು ಬರುತ್ತಾರೆ. ಕೃಷಿ ವಿಜ್ಞಾನಿಗಳಿಗೆ ಇದೊಂದು ರೀತಿಯಲ್ಲಿ ಪ್ರಯೋಗಶಾಲೆಯಾಗಿದೆ. ಮದ್ಯದಂಗಡಿ ತೆರೆಯುವುದರಿಂದ ಇವರಿಗೆಲ್ಲ ತೊಂದರೆಯಾಗುತ್ತದೆ ಎಂದು ಅವರು ಕಿಡಿಕಾರಿದರು.
ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇಂತಹದ್ದೊಂದು ಒಳ್ಳೆಯ ಕೇಂದ್ರದ ಸ್ಥಾಪನೆಗೆ ಜಾಗ ನೀಡಿದ್ದರು. ಈಗಾಗಲೇ ಇದು ಶತಮಾನೋತ್ಸವ ಆಚರಿಸಿಕೊಂಡಿದೆ. ಕೃಷಿಗೆ ಪೂರಕವಾದ ವೈಜ್ಞಾನಿಕ ಚಟುವಟಿಕೆಗಳು ನಡೆಯಬೇಕಾದ ತಾಣದಲ್ಲಿ ಮದ್ಯದಂಗಡಿ ತೆರೆಯುವುದು ಸರಿಯಲ್ಲ ಎಂದು ಟೀಕಿಸಿದರು.
ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ಗಾಯತ್ರಿ ವಿಜೇಂದ್ರ, ಜಿ.ಲೋಕೇಶ್ ಕುಮಾರ್, ಹೇಮಂತ್ ಗೌಡ, ಶ್ರೀನಿವಾಸ ಇತರರು ಇದ್ದರು.