ಮೈಸೂರು: ಮೈಸೂರು ಜಿಲ್ಲಾಧಿಕಾರಿಯ ನಿವಾಸ ‘ಜಲಸನ್ನಿಧಿ’ಯಲ್ಲಿ ನಡೆಸಿರುವ ₹ 16.35 ಲಕ್ಷ ವೆಚ್ಚದ ನವೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ಏಳು ದಿನದೊಳಗೆ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪ್ರಾದೇಶಿಕ ಆಯುಕ್ತರಿಗೆ ಆದೇಶಿಸಿದ್ದಾರೆ.
ಜಿಲ್ಲೆಯ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಜೂನ್ 5ರಂದು ಈ ಬಗ್ಗೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗೆ ಸುದೀರ್ಘವಾದ ಪತ್ರವೊಂದನ್ನು ಬರೆದಿದ್ದರು.
‘ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿಯಿಲ್ಲದೆ ‘ಜಲಸನ್ನಿಧಿ’ಯಲ್ಲಿ ನವೀಕರಣ ಕಾಮಗಾರಿ ನಡೆಸಿ, ನೆಲಹಾಸಿಗೆ ವಿಟ್ರಿಫೈಡ್ ಟೈಲ್ಸ್ ಅಳವಡಿಸಿದ ಈ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಅಮಾನತುಗೊಳಿಸಬೇಕು’ ಎಂದು ಸಾ.ರಾ.ಮಹೇಶ್ ಆ ಪತ್ರದಲ್ಲಿ ಆಗ್ರಹಿಸಿದ್ದರು. ಯಾವ್ಯಾವ ನಿಯಮಾವಳಿ ಉಲ್ಲಂಘನೆಯಾಗಿದ್ದವು ಎಂಬುದನ್ನು ಉಲ್ಲೇಖಿಸಿದ್ದರು.
ಶಾಸಕರ ಈ ದೂರಿನ ಅನ್ವಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತನಿಖೆ ನಡೆಸುವಂತೆ ಪ್ರಾದೇಶಿಕ ಆಯುಕ್ತರಿಗೆ ಜೂನ್ 18ರಂದು ಆದೇಶಿಸಿದ್ದಾರೆ. ಇದರಿಂದ ರೋಹಿಣಿ ಸಿಂಧೂರಿಗೆ ಮತ್ತೊಂದು ತನಿಖೆಯ ಕಂಟಕ ಎದುರಾಗಿದೆ.