ಮೈಸೂರು: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮೈಸೂರು ನಗರವನ್ನು ಸೀಲ್ಡೌನ್ ಮಾಡಲಾಗುತ್ತದೆ ಎಂಬ ವದಂತಿಯಿಂದಾಗಿ, ಜನರು ಅಗತ್ಯ ವಸ್ತುಗಳ ಖರೀದಿಗೆ ಶುಕ್ರವಾರ ಮುಗಿಬಿದ್ದಿದ್ದರು.
ಇದರಿಂದ ದೇವರಾಜ ಮಾರುಕಟ್ಟೆ, ಸಂತೆಪೇಟೆ, ಶಿವರಾಮಪೇಟೆ ಸೇರಿದಂತೆ ಬಹುತೇಕ ಕಡೆಯ ದಿನಸಿ ಅಂಗಡಿಗಳ ಮುಂದೆ ದಟ್ಟಣೆ ಹೆಚ್ಚಿತ್ತು. ಲಾಕ್ಡೌನ್ ಇರುವುದೇ ಮರೆತಂತಿತ್ತು. ಜನ ಸಂಚಾರ, ಮಧ್ಯಾಹ್ನದವರೆಗೂ ಸಹಜ ದಿನಗಳಲ್ಲಿ ಇದ್ದಂತೆಯೇ ಇತ್ತು.
ಹೆಚ್ಚಿನ ಸಂಖ್ಯೆಯಲ್ಲಿ ಜನರು ಸರತಿಯಲ್ಲಿ ನಿಂತು ಸಾಮಗ್ರಿಗಳ ಖರೀದಿಗೆ ತೊಡಗಿದ್ದರು. ಚಾಮರಾಜ ಜೋಡಿ ರಸ್ತೆಯ ಅಡುಗೆ ಎಣ್ಣೆ ಅಂಗಡಿಯ ಮುಂದೆ, ಉದ್ದನೆಯ ಸಾಲು ಕಂಡು ಬಂತು. ಬಹುತೇಕ ಕಡೆ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಪೊಲೀಸರೂ ತಡೆಯಲಾಗಲಿಲ್ಲ.ಅಂತರ ಕಾಯ್ದುಕೊಳ್ಳುವಂತೆ ಮೈಕ್ ಮೂಲಕ ಸೂಚನೆ ನೀಡುವುದಷ್ಟೇ ಸಾಧ್ಯವಾಯಿತು.
ಕೊನೆಗೆ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ‘ಸೀಲ್ ಡೌನ್ ಮಾಡುವ ತೀರ್ಮಾನ ತೆಗೆದುಕೊಂಡಿಲ್ಲ. ಎಂದಿನಂತೆ ದಿನಸಿ, ಹಾಲು, ಔಷಧ, ತರಕಾರಿ ಮತ್ತು ಹಣ್ಣು ಖರೀದಿಗೆ ಅವಕಾಶ ಇದೆ’ ಎಂದು ಸ್ಪಷ್ಟಪಡಿಸಿದರು.