ಹುಣಸೂರು: ‘ಹುಣಸೂರು ನಗರಸಭೆಗೆ ಸ್ವಚ್ಛ ಸರ್ವೇಕ್ಷಣ 2020ರಲ್ಲಿ ಪ್ರಥಮ ಸ್ಥಾನ ಲಭಿಸಿದ್ದು ಇದು ಎರಡನೇ ಪ್ರಶಸ್ತಿಯಾಗಿದೆ’ ಎಂದು ನಗರಸಭೆ ಪೌರಾಯುಕ್ತ ಮಂಜುನಾಥ್ ತಿಳಿಸಿದರು.
‘ಮೈಸೂರು ಅರಮನೆ ಆವರಣದಲ್ಲಿ ಗುರುವಾರ ನಡೆದ ಆನ್ಲೈನ್ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ 50 ರಿಂದ 1 ಲಕ್ಷ ಜನಸಂಖ್ಯೆ ಹೊಂದಿರುವ ವಿಭಾಗದಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ನಗರ ಶುಚಿತ್ವ ಹಾಗೂ ಸಾರ್ವಜನಿಕರ ಸಹಕಾರ ಕುರಿತು ನಾಗರಿಕರು ಸ್ವಯಂ ಪ್ರೇರಣೆಯಿಂದ ಆನ್ಲೈನ್ ಮೂಲಕ ನೀಡಿದ ಅಂಕಗಳನ್ನು ಪರಿಗಣಿಸಿದ ಕೇಂದ್ರ ನಗರಾಭಿವೃದ್ಧಿ ಮತ್ತು ಯೋಜನಾ ಸಚಿವಾಲಯ ಹುಣಸೂರು ನಗರಸಭೆಗೆ ಬಂದ ಅತಿ ಹೆಚ್ಚು ಅಂಕವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಘೋಷಿಸಿದೆ’ ಎಂದರು.
2019ರಲ್ಲಿ ನಗರಸಭೆಗೆ ಸ್ವಚ್ಛ ಭಾರತ್ ಅಭಿಯಾನ ಯೋಜನೆಯಲ್ಲಿ ನಗರಸಭೆ ವತಿಯಿಂದ ಘನತ್ಯಾಜ್ಯ ನಿರ್ವಹಣೆ ಹಾಗೂ ಸಂಸ್ಕರಣೆ ಕುರಿತು ಕೈಗೊಂಡ ಕಾರ್ಯಕ್ರಮಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಮಹಾತ್ಮಗಾಂಧಿ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿಗೆ ಭಾಜವಾಗಿದೆ.
‘ಎರಡನೇ ಬಾರಿಗೆ ದಕ್ಷಿಣ ಭಾರತದ ನಗರಸಭೆಗಳಲ್ಲಿ ಈ ಪ್ರಶಸ್ತಿ ಹುಣಸೂರು ನಗರಸಭೆಗೆ ಲಭಿಸಿದ್ದು, ಪೌರಕಾರ್ಮಿಕರ ಶ್ರಮ ಹಾಗೂ ಸಾರ್ವಜನಿಕರ ಸಹಕಾರದಿಂದ ಪ್ರಶಸ್ತಿ ಬಂದಿದೆ’ ಎಂದುಮಂಜುನಾಥ್ ಹೇಳಿದರು.
ಅಭಿನಂದನೆ: ಹುಣಸೂರು ನಗರಸಭೆಗೆ 2ನೇ ಬಾರಿಗೆ ದಕ್ಷಿಣ ಭಾರತದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಹುಣಸೂರು ನಾಗರಿಕರ ಪರವಾಗಿ ಪೌರಕಾರ್ಮಿಕರು ಮತ್ತು ನಗರಸಭೆ ಆಡಳಿತ ವರ್ಗವನ್ನು ಅಭಿನಂದಿಸುತ್ತೇನೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಮತ್ತು ವಿಧಾನಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ತಿಳಿಸಿದ್ದಾರೆ.