ಮೈಸೂರು:ಕನ್ನಡ ಮಾಧ್ಯಮದಲ್ಲಿ ಓದಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದ ಈ ವಿದ್ಯಾರ್ಥಿನಿಯರ ಪೋಷಕರು ಆನ್ಲೈನ್ ಕ್ಲಾಸ್ಗೆ ಅಗತ್ಯವಿದ್ದ ಸ್ಮಾರ್ಟ್ಫೋನ್ ಖರೀದಿಸಲು ಸಾಲ ಮಾಡಿದ್ದರು. ಅವರ ಪರಿಶ್ರಮ ಈಗ ಸಾರ್ಥಕವಾಗಿದೆ.
ಕುಂಬಾರಕೊಪ್ಪಲಿನ ಕೆ.ಪುಟ್ಟಸ್ವಾಮಿ ಕನ್ನಡ ಮಾಧ್ಯಮ ಶಾಲೆಯ ಪ್ರಿಯಾ ಹಾಗೂ ತಿ.ನರಸೀಪುರ ತಾಲ್ಲೂಕಿನ ಮೆಣಸಿಕ್ಯಾತನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಜಿ.ಎಸ್.ಹರ್ಷಿತಾ ಸಾಧಕ ವಿದ್ಯಾರ್ಥಿನಿಯರು. ಇಬ್ಬರ ಪೋಷಕರ ಬಳಿಯೂ ಕೀಪ್ಯಾಡ್ ಮೊಬೈಲ್ ಇತ್ತು. ನಂತರ ಅನಿವಾರ್ಯವಾಗಿ ಸ್ಮಾರ್ಟ್ಫೋನ್ ಖರೀದಿಸಿದರು.
ತಿ.ನರಸೀಪುರ ತಾಲ್ಲೂಕಿನ ಬನ್ನೂರು ಹೋಬಳಿಯ ಗುಡ್ಡದಕೊಪ್ಪಲಿನ ಕೃಷಿಕ ಶಿವಶಂಕರೇಗೌಡ–ಚಿಕ್ಕತಾಯಮ್ಮ ದಂಪತಿ ಪುತ್ರಿಹರ್ಷಿತಾ ‘2 ಕಿ.ಮೀ ದೂರದಲ್ಲಿದ್ದ ಪ್ರೌಢಶಾಲೆಗೆ ಮೊದಲೆರಡು ವರ್ಷಗಳ ಕಾಲ ಸೈಕಲ್ನಲ್ಲಿಯೇ ಹೋಗುತ್ತಿದ್ದೆ. ಅಪ್ಪ ಕಷ್ಟಪಟ್ಟು ಸ್ಮಾರ್ಟ್ಫೋನ್ ಖರೀದಿಸಿದರೂ, ನೆಟ್ವರ್ಕ್ಗಾಗಿ ಮನೆಯ ಚಾವಣಿ ಏರಬೇಕಾಗಿತ್ತು. ಚಂದನಾ ಟಿ.ವಿಯ ಕಾರ್ಯಕ್ರಮಗಳು ನೆರವಾದವು. ಟ್ಯೂಷನ್ಗೆ ಹೋಗದೇ ಮನೆಯಲ್ಲೇ ಓದಿದೆ ’ ಎಂದು ಸ್ಮರಿಸಿದರು.
ನಗರದ ಹೆಬ್ಬಾಳದ ನಿವಾಸಿ, ಪೇಂಟರ್ ವೃತ್ತಿ ಮಾಡುತ್ತಿರುವ ರುದ್ರಸ್ವಾಮಿ–ರೇಖಾ ದಂಪತಿ ಪುತ್ರಿ ಪ್ರಿಯಾ ಪ್ರತಿಕ್ರಿಯಿಸಿ, ‘ಅಪ್ಪನ ಬಳಿ ಸ್ಮಾರ್ಟ್ಫೋನ್ ಖರೀದಿಸಲು ಹಣವಿರಲಿಲ್ಲ. ಕೆಲಸವೂ ಸಿಗುತ್ತಿರಲಿಲ್ಲ. ಸ್ನೇಹಿತರೊಬ್ಬರಿಂದ ಹಣ ಪಡೆದು ಫೋನ್ ತೆಗೆದುಕೊಟ್ಟರು’ ಎಂದು ನೆನಪಿಸಿಕೊಂಡರು.
‘ರಾಮಕೃಷ್ಣ ಆಶ್ರಮದ ‘ವಿವೇಕ ಶಿಕ್ಷಣ’ ಯೋಜನೆಯ ಪಿಡಿಎಫ್ ರೂಪದಲ್ಲಿ ನೀಡಿದ ಪಠ್ಯಗಳು, ವಿಶೇಷ ಉಚಿತ ತರಗತಿಗಳು ನೆರವಾದವು’ ಎಂದರು.
‘ಟ್ಯೂಷನ್ಗೆ ಹೋಗದೇ ಸಾಧನೆ ಮಾಡಿದ್ದು ಹೆಮ್ಮೆ ಎನಿಸಿದೆ. ಶಿಕ್ಷಕರು, ತಾಯಿ– ತಂದೆಗೆ ಥ್ಯಾಂಕ್ಸ್ ಹೇಳಬೇಕು. ವಕೀಲೆಯಾಗುವ ಆಸೆ ಇದೆ’ ಎಂದರು.