ಮೈಸೂರು: ಒಳಚರಂಡಿ ಪೌರಕಾರ್ಮಿಕರನ್ನು ಕಾಯಂಗೊಳಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಹೇಳಿದರು.
ಇಲ್ಲಿನ ಶ್ರೀಕೃಷ್ಣಧಾಮದಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಅವರೊಂದಿಗೆ ಸುಮಾರು 15 ನಿಮಿಷಗಳ ಕಾಲ ಈ ವಿಷಯ ಕುರಿತು ಚರ್ಚೆ ನಡೆಸಿದರು.
ಈ ಕುರಿತು ಚಾಮುಂಡೇಶ್ವರಿ ಗೆಳೆಯರ ಪ್ರಗತಿಪರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜಿ.ಶ್ರೀನಿವಾಸ್ ಅವರು ನೀಡಿದ ಮನವಿಪತ್ರವನ್ನು ಸ್ವಾಮೀಜಿ ಸಚಿವರಿಗೆ ಕೊಟ್ಟು, ಶೀಘ್ರದಲ್ಲಿ ಕಾಯಂಗೊಳಿಸಲು ಪ್ರಯತ್ನಿಸಬೇಕು ಎಂದರು.
ಪೌರಕಾರ್ಮಿಕರು ವಾಸಿಸುತ್ತಿರುವ ಕೊಳಗೇರಿ ನಿರ್ಮೂಲನಾ ಮಂಡಳಿಯ ಮನೆಗಳಿಗೆ ಖಾತೆ ಮತ್ತು ಕಂದಾಯ ಮಾಡಿಕೊಡಬೇಕೆಂದು ಈ ಸಮಯದಲ್ಲಿ ಸ್ವಾಮೀಜಿ ಗಮನ ಸೆಳೆದರು.
ಖಾತೆ ಮತ್ತು ಕಂದಾಯ ಇಲ್ಲದೇ ಬ್ಯಾಂಕ್ ಸಾಲ ಸಿಕ್ಕುತ್ತಿಲ್ಲ. ಇದರಿಂದ ಪೌರಕಾರ್ಮಿಕರಿಗೆ ತೊಂದರೆಯಾಗಿದೆ. ಶೀಘ್ರದಲ್ಲಿ ಈ ಸಮಸ್ಯೆ ಬಗೆಹರಿಸುವಂತೆ ಶ್ರೀನಿವಾಸ್ ಮನವಿ ಮಾಡಿದರು.
ಮನವಿ ಪತ್ರಗಳನ್ನು ಸ್ವೀಕರಿಸಿದ ಸಚಿವ ಸೋಮಶೇಖರ್ ಈ ಕುರಿತು ಗಮನ ಹರಿಸುವುದಾಗಿ ಭರವಸೆ ನೀಡಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಶಾಸಕ ಎಲ್.ನಾಗೇಂದ್ರ ಇದ್ದರು.