ಮೈಸೂರು: ‘ಹಿಂದೂ ದೇಗುಲಗಳ ಬಗ್ಗೆ ಇಷ್ಟು ದಿನ ಇಲ್ಲದ ಪ್ರೀತಿ ಈಗ ಇದ್ದಕ್ಕಿದ್ದಂತೆ ಮೂಡಿದ್ದು ಏಕೆ’ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಿದ್ದರಾಮಯ್ಯ ಅವರೇ ನಿಮಗೆ ಈಗ ದೇವಸ್ಥಾನಗಳ ಮೇಲೆ ಪ್ರೀತಿ, ಕಾಳಜಿ ಏಕೆ ಬಂತು ಎಂಬುದು ಗೊತ್ತಾಗುತ್ತಿಲ್ಲ. ವಿಗ್ರಹ ಭಂಜಕ ಟಿಪ್ಪು ಸುಲ್ತಾನನ ಜಯಂತಿ ಮಾಡುವಾಗ ನಿಮಗೆ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ ಎಂಬ ಅರಿವು ಇರಲಿಲ್ಲವೇ? ಎಂದು ತಿರುಗೇಟು ನೀಡಿದರು.
‘ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಹೇಳಿ ಓಟಿಗಾಗಿ ಹಿಂದೂ ಧರ್ಮವನ್ನು ಒಡೆಯಲು ನೀವು ಮುಂದಾಗಿದ್ದೀರಿ. ದೇವಾಲಯಗಳ ತೆರವು ವಿಚಾರವನ್ನೂ ನೀವು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ’ ಎಂದು ಹರಿಹಾಯ್ದರು.
‘ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ವಿಚಾರದಲ್ಲಿ ಹಿಂದೆ ಇದ್ದ ಬಿಜೆಪಿ ಸರ್ಕಾರದಿಂದಲೂ ತಪ್ಪಾಗಿದೆ. ನಿಮ್ಮ ಸರ್ಕಾರದಿಂದಲೂ ತಪ್ಪು ಉಂಟಾಗಿದೆ. ನೀವು ಐದು ವರ್ಷಗಳ ಅವಧಿಯಲ್ಲಿ ತಪ್ಪನ್ನು ಸರಿಪಡಿಸುವ ಕೆಲಸ ಮಾಡಲಿಲ್ಲ. ಅಧಿಕಾರಿಗಳು ಮಾಡಿದ ತಪ್ಪಿಗೆ ರಾಜಕಾರಣಿಗಳು ಪರಸ್ಪರ ದೋಷಾರೋಪ ಮಾಡಿಕೊಳ್ಳುವುದು ಬೇಡ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.