ಸರಗೂರು (ಮೈಸೂರು ಜಿಲ್ಲೆ): ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನಲ್ಲಿ ಕಳೆದ ಎರಡು ತಿಂಗಳಿನಿಂದ ಕಾಣಿಸಿಕೊಳ್ಳುತ್ತಿದ್ದ, ಅಂದಾಜು 11 ವರ್ಷದ ಗಂಡು ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸೆರೆ ಹಿಡಿದಿದ್ದಾರೆ.
ಬಂಡೀಪುರ ಹುಲಿ ರಕ್ಷಿತಾರಣ್ಯಕ್ಕೆ ಸೇರಿದ ಗುಂಡ್ರೆ ಹಾಗೂ ಎನ್.ಬೇಗೂರು ವಲಯದಿಂದ, ಜುಲೈನಲ್ಲೇ ಹೊರಬಂದಿದ್ದ ಈ ಹುಲಿಯು ಮೂರ್ಬಂದ್, ಹೆಗ್ಗನೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಸುಮಾರು 15ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದಿತ್ತು. ಇದರ ಸೆರೆಗೆ ಅರಣ್ಯ ಇಲಾಖೆಯು ಕೃಷ್ಣ, ಮಹೇಂದ್ರ, ಜಯಪ್ರಕಾಶ, ಗಣೇಶ ಹಾಗೂ ಪಾರ್ಥಸಾರಥಿ ಎಂಬ ಆನೆಗಳ ಸಹಾಯದಿಂದ ಕೂಂಬಿಂಗ್ ನಡೆಸಿತ್ತು.
ಮಂಗಳವಾರ ಮಧ್ಯಾಹ್ನ, ಹುಲಿಯು ಕಣ್ಣಿಗೆ ಬೀಳುತ್ತಿದ್ದಂತೆಯೇ ಪಶುವೈದ್ಯ ಡಾ.ನಾಗರಾಜ್ ಹಾಗೂ ಇತರ ಸಿಬ್ಬಂದಿ ಯಶಸ್ವಿಯಾಗಿ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಾ.ನಾಗರಾಜ್, ‘ಹುಲಿಯು ಆರೋಗ್ಯವಾಗಿದೆ. ಆದರೆ, ವಯಸ್ಸಾಗಿರುವುದರಿಂದ ಬೇಟೆಯಾಡುವ ಶಕ್ತಿಯನ್ನು ಕಳೆದುಕೊಂಡಿದೆ’ ಎಂದು ತಿಳಿಸಿದರು.
ಬಂಡೀಪುರ ಹುಲಿ ರಕ್ಷಿತಾರಣ್ಯದ ನಿರ್ದೇಶಕ ಟಿ.ಬಾಲಚಂದ್ರ ಪ್ರತಿಕ್ರಿಯಿಸಿ, ‘ಎಸಿಎಫ್ ರವಿಕುಮಾರ್ ನೇತೃತ್ವದಲ್ಲಿ 80ಕ್ಕೂ ಅಧಿಕ ಸಿಬ್ಬಂದಿ ಹಾಗೂ 5 ಆನೆಗಳ ನೆರವಿನಿಂದ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಬನ್ನೇರುಘಟ್ಟದ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ’ ಎಂದು ಹೇಳಿದರು.
ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ರವಿಕುಮಾರ್, ಪಶುವೈದ್ಯಾಧಿಕಾರಿ ನಾಗರಾಜು, ವಲಯ ಅರಣ್ಯಧಿಕಾರಿಗಳಾದ ಚೇತನ್, ಶಶಿಧರ್, ಮಹದೇವ್, ಮಂಜುನಾಥ್, ಪುಟ್ಟರಾಜು, ಷಣ್ಮುಗ, ಎಸ್ಟಿಪಿಎಫ್ಮ ಆರ್ಎಫ್ಒ ಸಿದ್ದರಾಜು, ಡಿಆರ್ಎಫ್ಒ ಅನಿಲ್ ಕುಮಾರ್, ರಾಮಾಂಜನೇಯಲು, ನವೀನ್ ಕುಮಾರ್, ಶಿವನೇಗೌಡ, ರಾಜೀವ್, ಆಂಥೋನಿ, ಪಶುವೈದ್ಯ ಸಹಾಯಕ ಅಕ್ರಂ ಪಾಷ, ಅರಣ್ಯ ರಕ್ಷಕ ಟಿ.ಆರ್.ರಂಜಿತ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ತಂಡದಲ್ಲಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.