ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಈಚೆಗೆ ಹುಲಿ ಬೇಟೆಯಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.
‘ಆರೋಪಿ ವಟ್ಟಂಗಡ ರಾಜು ಎಂಬಾತನನ್ನು ರಾಮನಗರ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಬಂಧಿಸಲಾಯಿತು. ಈತ ನೀಡಿದ ಮಾಹಿತಿ ಮೇರೆಗೆ ಕೊಡಗಿನ ವಿಶ್ವನಾಥ್ ಅವರ ಕಾಫಿ ತೋಟದಲ್ಲಿ ಹೂತ್ತಿಟ್ಟ 4 ಉಗುರು ಮತ್ತು 2 ಕೋರೆ ಹಲ್ಲುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಹುಲಿ ಯೋಜನಾ ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದ್ದಾರೆ.
ನಾಗರಹೊಳೆ ಅರಣ್ಯದ ಕಲ್ಲಹಳ್ಳ ವಲಯದ ತಟ್ಟೆಕೆರೆ ಹಾಡಿ ಬಳಿ ಆ. 26ರಂದು ಹುಲಿಯೊಂದನ್ನು ಬೇಟೆಯಾಡಿ, ಅದರ 4 ಕಾಲುಗಳ ಉಗುರುಗಳು ಮತ್ತು ಕೋರೆ ಹಲ್ಲುಗಳನ್ನು ಅಪಹರಿಸಲಾಗಿತ್ತು. ಈ ಸಂಬಂಧ ಒಬ್ಬ ಆರೋಪಿಯನ್ನು ಘಟನೆ ನಡೆದ ಮರುದಿನವೇ ಬಂಧಿಸಲಾಗಿತ್ತು. ಇನ್ನೂ ಇಬ್ಬರ ಪತ್ತೆಗಾಗಿ ಶೋಧ ಕಾರ್ಯ ನಡೆದಿದೆ.
ಕಾರ್ಯಾಚರಣೆಯಲ್ಲಿ ನಾಗರಹೊಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಾಲ್ ಆಂಥೋಣಿ, ಆರ್ಎಫ್ಒ ಗಿರೀಶ್ ಪಿ.ಚೌಗಲೆ, ಎಂ.ಸಿ.ಯೋಗೇಶ್ ಭರಮಪ್ಪ, ಗಣೇಶ್, ನಿರಾಲ್ ಕುಮಾರ್ ಮತ್ತು ಬಸವರಾಜು ಇದ್ದರು.